ಈಜಿಪುರ ಸಮೀಪದ ಲಕ್ಷ್ಮಣರಾವ್ ನಗರ ಕೊಳೆಗೇರಿ 1ನೇ ಅಡ್ಡರಸ್ತೆಯಲ್ಲಿ ವಾಸವಿರುವ ಪ್ರಕಾಶ್ ಮತ್ತು ದೀಪಾ ದಂಪತಿಯ ಮಗಪ್ರಶಾಂತ್ (6) ಮೃತಪಟ್ಟ ಬಾಲಕ.
ಆತ ಜಯನಗರ ಸಮೀಪದ ಮಾರೇನಹಳ್ಳಿಯ ಖಾಸಗಿ ಶಾಲೆಯೊಂದರಲ್ಲಿ ಒಂದನೇ ತರಗತಿ ಓದುತ್ತಿದ್ದ.
ಆರ್ಥಿಕವಾಗಿ ಹಿಂದುಳಿದವರಿಗೆ ಹೊಸ ಮನೆಗಳನ್ನು ನಿರ್ಮಿಸುವ ಉದ್ದೇಶಕ್ಕಾಗಿ ಈಜಿಪುರದಲ್ಲಿ ಸುಮಾರು 15 ಅಡಿ ಆಳದ ಗುಂಡಿ ತೆಗೆಯಲಾಗಿದೆ. ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು. ಆಟವಾಡಲು ಆ ಗುಂಡಿಯ ಬಳಿ ಹೋಗಿದ್ದ ಪ್ರಶಾಂತ್ ಆಕಸ್ಮಿಕವಾಗಿ ಒಳಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆಯಾದರೂ ಪ್ರಶಾಂತ್ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಪೋಷಕರು ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಡುತ್ತಿದ್ದಾಗ ಗುಂಡಿಯಲ್ಲಿ ಆತನ ಶವ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಘಟನೆ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಲಕ್ಷ್ಯವೇ ಕಾರಣ: ‘ಮನೆಗಳನ್ನು ನಿರ್ಮಿಸುತ್ತಿರುವ ಜಾಗದ ಬಳಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಜಾಗದ ಸುತ್ತ ತಡೆಗೋಡೆ ನಿರ್ಮಿಸಿಲ್ಲ. ಮೇವರಿಕ್ ಹೋಲ್ಡಿಂಗ್ಸ್ ಅಂಡ್ ಇನ್ವೆಸ್ಟ್ಮೆಂಟ್ ಸಂಸ್ಥೆಯ ನಿರ್ಲಕ್ಷ್ಯವೇ ಪ್ರಶಾಂತ್ ಸಾವಿಗೆ ಕಾರಣ’ ಎಂದು ಲಕ್ಷ್ಮಣರಾವ್ನಗರ ನಿವಾಸಿ ಶಾಂತಿ ದೂರಿದ್ದಾರೆ.