ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಆನೂರ(ಕೆ) ಗ್ರಾಮದ ಭೀಮಾನದಿ ಬಳಿ ರೂ. 4 ಕೋಟಿ ವೆಚ್ಚದಲ್ಲಿ ಆರಂಭವಾಗಿರುವ ರಾಜೀವಗಾಂಧಿ ಸಬ್ಮಿಷನ್ ಕುಡಿಯುವ ನೀರು ಸರಬರಾಜು ಯೋಜನಾ ಸ್ಥಳಕ್ಕೆ ಶಾಸಕ ಬಾಬುರಾವ ಚಿಂಚನಸೂರು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದರೂ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ನ ಅಧಿಕಾರಿಗಳು ತಿಳಿಸಿದರು. ಅಧಿಕಾರಿಗಳ ಬೇಜವಾಬ್ದಾರಿ ಉತ್ತರಕ್ಕೆ ಚಿಂಚನಸೂರ ಆಕ್ರೋಶ ವ್ಯಕ್ತಪಡಿಸಿದರು.
ನೀರು ಶೇಖರಣೆ ಟ್ಯಾಂಕ್, ಶುದ್ಧೀಕರಣ ಘಟಕ, ಓವರ್ಹೆಡ್ ಟ್ಯಾಂಕ್ಗಳು ಹಾಗೂ ಪೈಪ್ಲೈನ್ ಪೂರ್ಣಗೊಂಡಿದೆ. ಆದರೆ, ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಅಧಿಕಾರಿಗಳು ಹೇಳಿದರು. ಸ್ಥಳದಿಂದಲೇ ಜೆಸ್ಕಾಂ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ ಚಿಂಚನಸೂರ, ಕೂಡಲೇ ಎಕ್ಸ್ಪ್ರೆಸ್ ಲೈನ್ ಕೊಡಲು ಸೂಚನೆ ನೀಡಿರು. ಶೀಘ್ರದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಚಿಂಚನಸೂರು ತಿಳಿಸಿದ್ದಾರೆ.
ಭೀಮಾ ನದಿಯಿಂದ ಆನೂರ(ಕೆ) ಸೇರಿದಂತೆ 8 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಅಂದಾಜು 17 ಸಾವಿರ ಜನರಿಗೆ ಈ ಯೋಜನೆಯ ಲಾಭವಾಗಲಿದೆ. ಕೂಡಲೇ ಈ ಯೋಜನೆ ಪೂರ್ಣಗೊಳಿಸಿ ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಯೋಜನೆಯ ನೀರು ಸರಬರಾಜು ನಿರ್ವಹಣೆಯು ಗ್ರಾಮ ಪಂಚಾಯಿತಿಗೆ ಇದೆ. ಪಂಚಾಯತಿಯಲ್ಲಿ ಇದರ ನಿರ್ವಹಣೆಗೆ ಆರ್ಥಿಕ ತೊಂದರೆ ಮತ್ತು ತಾಂತ್ರಿಕ ಸಿಬ್ಬಂದಿ ಇಲ್ಲ. ಹೀಗಾಗಿ ಈ ಯೋಜನೆಯನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ಗೆ ವಹಿಸಿ ಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಇದೇ ಮಾದರಿಯಲ್ಲಿ ಯರಗೋಳ ಹಾಗೂ ಗೊಂದಡಗಿ ಗ್ರಾಮದ ಬಳಿಯೂ ತಲಾ ರೂ. 4 ಕೋಟಿ ವೆಚ್ಚದಲ್ಲಿ ರಾಜೀವ ಗಾಂಧಿ ಕುಡಿಯುವ ನೀರು ಸರಬರಾಜು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಎರಡೂ ಕಡೆಯೂ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಯರಗೋಳ ಯೋಜನೆಗೆ ರೈಲ್ವೆ ಕ್ರಾಸಿಂಗ್ ಮಾಡಿ ಪೈಪ್ಲೈನ್ ಮಾಡಬೇಕಾಗಿದೆ. ಇದರಿಂದಾಗಿ ವಿಳಂಬವಾಗಿದೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ನ ಅಧಿಕಾರಿಗಳು ತಿಳಿಸಿದರು.
ರೈಲ್ವೆ ಕ್ರಾಸಿಂಗ್ ಮಾಡುವುದಕ್ಕೆ ಅನುಮತಿ ದೊರಕುವವರೆಗೆ ಹಿಂದಿನ ಊರುಗಳಿಗಾದರೂ ನೀರು ಸರಬರಾಜು ಮಾಡುವುದಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಚಿಂಚನಸೂರ, ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹಂಪಣಗೌಡ ಬೆಳಗುಂದಿ, ಹಣಮಂತಪ್ಪ ಬಳಿಚಕ್ರ, ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಮುಖಂಡರಾದ ಬಸವರಾಜಪ್ಪಗೌಡ ಗೊಂದೆಡಗಿ, ಚಂದ್ರಶೇಖರ ವಾರದ, ನಿರಂಜನರೆಡ್ಡಿ, ಬಸವರಾಜಸ್ವಾಮಿ ಬದ್ದೇಪಲ್ಲಿ, ಭೀಮರಾಯ, ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.