ಕೋಲಾರ: ರಾಷ್ಟ್ರೀಯ ಪ್ರಾಯೋಗಿಕ ಕುಡಿಯುವ ನೀರು ಭದ್ರತಾ ಯೋಜನೆಗೆ ಆಯ್ಕೆಯಾಗಿರುವ ಜಿಲ್ಲೆಯ ಮುಳಬಾಗಲು ತಾಲ್ಲೂಕಿನಲ್ಲಿ ನೀರಿನ ಲಭ್ಯತೆಯನ್ನು ಅಳೆಯುವ ಸಲುವಾಗಿಯೇ ತಾಲ್ಲೂಕಿನ ಎಲ್ಲ 30 ಗ್ರಾಮ ಪಂಚಾಯತಿಗಳ 186 ಕೊಳವೆಬಾವಿಗಳಿಗೆ ಮಾಪಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಯೋಜನೆ ಅನುಷ್ಠಾನ ತಂಡದ ಮುಖ್ಯಸ್ಥ ಎಂ,ಎಸ್.ರವಿಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಐದು ಗ್ರಾಮ ಪಂಚಾಯತಿಗಳಲ್ಲಿ ಯೋಜನೆ ಅನುಷ್ಠಾನದ ಕುರಿತು ಜಿಲ್ಲಾ ಪಂಚಾಯತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮ ಪ್ರವಾಸದ ಸಂದರ್ಭದಲ್ಲಿ ಅವರು ಊರುಕುಂಟೆ ಮಿಟ್ಟೂರು ಕೆರೆಯ ಕೊಳವೆಬಾವಿಗೆ ಅಳವಡಿಸಿದ ಮಾಪಕದ ವಿವರಣೆ ನೀಡಿದರು.
ಕೊಳವೆಬಾವಿಗೆ ಮೋಟರ್ ಚಾಲನೆಗೊಳ್ಳುವ ಮುನ್ನ ಮತ್ತು ಚಾಲನೆಗೊಳ್ಳುವ ಸಂದರ್ಭದಲ್ಲಿ ಕೊಳವೆಬಾವಿಯಲ್ಲಿ ನೀರಿನ ಮಟ್ಟವನ್ನು ಅಳೆಯಲಾಗುವುದು.
ನೀರು ಯಾವ ವೇಗದಲ್ಲಿ ಎಷ್ಟು ದೊರಕುತ್ತದೆ. 100 ಲೀಟರ್ ಡ್ರಂ ತುಂಬಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಪ್ರತಿ 15 ದಿನಕ್ಕೊಮ್ಕೆ ಪರಿಶೀಲಿಸಲಾಗುವುದು. ಕೊಳವೆಬಾವಿಯಲ್ಲಿ ನೀರು ಹೆಚ್ಚಾಗುತ್ತದೆಯೇ, ಕಡಿಮೆಯಾಗುತ್ತದೆಯೇ ಎಂಬ ಸ್ಪಷ್ಟ ಚಿತ್ರಣ ದೊರಕುವುದರಿಂದ ನೀರು ಪೂರೈಕೆಯ ಹೊಸ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲಕರವಾಗುತ್ತದೆ ಎಂದರು.
ದಿನಕ್ಕೆ 28 ಲೀಟರ್ ನೀರು: ಮಾನದಂಡದ ಪ್ರಕಾರ ತಾಲ್ಲೂಕಿನ ಜನರಿಗೆ ದಿನವೊಂದಕ್ಕೆ ತಲಾ 55ಲೀ. ನೀರನ್ನು ಪೂರೈಸಬೇಕು. ಆದರೆ ಈಗ ಕೇವಲ 28 ಲೀ. ನೀರನ್ನಷ್ಟೇ ಪೂರೈಸಲಾಗುತ್ತಿದೆ. ಈ ಪ್ರಮಾಣವನ್ನು ಹೆಚ್ಚಿಸಬೇಕಾದರೆ ಅಂತರ್ಜಲ ಮರುಪೂರಣ ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಕೆರೆ ಅಂಗಳದಲ್ಲಿ ನೀರು ಮರುಪೂರಣ ತೊಟ್ಟಿಗಳನ್ನು ನಿರ್ಮಿಸುವ ಕಾಮಗಾರಿಗಳನ್ನೂ ನಡೆಸಲಾಗುತ್ತಿದೆ ಎಂದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 50 ರೂಪಾಯಿಗೆ 10 ಸಾವಿರ ಲೀ. ನೀರನ್ನು ಪ್ರತಿ ಮನೆಗೂ ನೀಡುವ ಅದ್ಭುತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಷ್ಟು ದೊಡ್ಡಮಟ್ಟದಲ್ಲಿ ಅಲ್ಲವಾದರೂ ತಾಲ್ಲೂಕಿನಲ್ಲೂ ಅಂಥದೊಂದು ವ್ಯವಸ್ಥೆಯನ್ನು ರೂಪಿಸುವ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಅಧಿಕಾರಿ–ಪ್ರತಿನಿಧಿಗಳನ್ನು ಅಲ್ಲಿಗೆ ಅಧ್ಯಯನದ ಸಲುವಾಗಿ ಕರೆದೊಯ್ಯಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಟಿ.ಅಗರ ಕೆರೆಯ ಅಂಗಳದಲ್ಲಿ 100 ಮೀ. ಅಗಲ, 100 ಮೀ ಉದ್ದ ಹಾಗೂ 1 ಮೀಟರ್ ಆಳದ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಸುತ್ತಲಿನ ರಾಜಕಾಲುವೆಗಳ ನೀರೆಲ್ಲರೂ ಈ ಹೊಂಡದಲ್ಲಿ ಬಂದು ಇಂಗುವ ಮೂಲಕ ಸುತ್ತಮುತ್ತಲಿನ ಕೊಳವೆಬಾವಿಗಳ ಅಂತರ್ಜಲ ಮರುಪೂರಣವಾಗುತ್ತದೆ. ಇಂಥ ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ಅನುಸರಿಸಿಯೇ ನೀರಿನ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ ಎಂದರು.
ಕುಪ್ಪಂ ಪಾಳ್ಯ: ತಾಲ್ಲೂಕಿನ ಗಡಿ ಗ್ರಾಮವಾದ ಮೋತಕಪಲ್ಲಿ ಗ್ರಾಮ ಪಂಚಾಯಿತಿಯ ಕುಪ್ಪಂಪಾಳ್ಯದ ಎಲ್ಲ 90 ಮನೆಗಳಲ್ಲೂ ಶೌಚಾಲಯವನ್ನು ನಿರ್ಮಿಸಲಾಗಿದೆ. ಇದೇ ರೀತಿ ಇಡೀ ತಾಲ್ಲೂಕಿನಲ್ಲಿ ಎಲ್ಲರಿಗೂ ಶೌಚಾಲಯ ನಿರ್ಮಿಸುವ ಕಾರ್ಯಕ್ರಮವೂ ಭರದಿಂದ ನಡೆದಿದೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಅರುಣಕುಮಾರ್ ತಿಳಿಸಿದರು.
ಬಳಕೆಗೆ ಆದ್ಯತೆ: ಇದುವರೆಗೂ ಶೌಚಾಲಯಗಳ ನಿರ್ಮಾಣದ ಕಡೆಗೆ ಗಮನ ಹರಿಸಲಾಗುತ್ತಿತ್ತು. ಆದರೆ ಈಗ ನಿರ್ಮಾಣಗೊಂಡ ಶೌಚಾಲಯಗಳ ಬಳಕೆಯ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಬಹಳಷ್ಟು ಮಂದಿ ಶೌಚಾಲಯಗಳನ್ನು ನಿರ್ಮಿಸಿ ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದರು.
ನಿಜವಾದ ಉದ್ದೇಶಕ್ಕೆ ಬಳಸಿದರೆ ಮಾತ್ರ ಅನುದಾನವನ್ನು ಬಿಡುಗಡೆ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಶೌಚಾಲಯವನ್ನು ನಿರ್ಮಿಸಿದ ಬಳಿಕ ಉದ್ಯೋಗಖಾತ್ರಿ ಯೋಜನೆ ಅನುದಾನವಾದ ₨ 4700 ನೀಡಲಾಗುವುದು. ನಂತರ, ಶೌಚಾಲಯ ಬಳಕೆಯನ್ನು ಪರಿಶೀಲಿಸಿ ನಿರ್ಮಲ ಭಾರತ ಅಭಿಯಾನದ ಅನುದಾನ ₨ 4500 ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.