ಕವಿತಾಳ: ಪಟ್ಟಣದ 1ನೇ ವಾರ್ಡ್ನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಪರಿಹರಿಸುವಂತೆ ಬುಧವಾರ ಗ್ರಾಮ ಪಂಚಾಯಿತಿಗೆ ದಿಢೀರನೇ ಆಗಮಿಸಿದ ಮಹಿಳೆಯರು ಒತ್ತಾಯಿಸಿದರು.ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ಕಾರ್ಯಲಯಕ್ಕೆ ಆಗಮಿಸಿದ ಮಹಿಳೆಯರ ಸಹಿತ ವಾರ್ಡ್ನ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಕುರಿತು ವಿವರಿಸಿದರು.
ಕಳೆದ ಒಂದು ತಿಂಗಳಿಂದ ನೀರು ಸರಬರಾಜು ಸಂಪೂರ್ಣ ಸ್ಥಗಿತವಾಗಿದ್ದು ನೀರಿಗಾಗಿ ಪಕ್ಕದ ವಾರ್ಡ್ಗೆ ಅಲೆಯುವಂತಾಗಿದೆ ಎಂದು ಮಹಿಳೆಯರು ಆರೋಪಿಸಿದರು. 1ನೇ ವಾರ್ಡ್ಗೆ ನೀರು ಪೂರೈಸಲು ಖಾಸಗಿ ಕೊಳವೆಭಾವಿಯನ್ನು ಲೀಸ್ ಪಡೆಯಲಾಗಿದೆ ಮತ್ತು ದೋಬಿಘಾಟ್ ಕೊಳವೆಭಾವಿಯ ವಿದ್ಯುತ್ ಬಿಲ್ ಪಾವತಿಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಪಂಪನಗೌಡ ಸಮಜಾಯಿಷಿ ನೀಡಿದರು.
ಪ್ರತಿದಿನ ಸರದಿ ಪ್ರಕಾರ ನೀರು ಸರಬರಾಜು ಮಾಡಲಾಗುವುದು ಮತ್ತು ನಿಯಂತ್ರಣ ವಾಲ್ವ್ಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಶಿವಲಿಂಗಪ್ಪ ಸಜ್ಜನ, ಅಯ್ಯಣ್ಣ ಸಜ್ಜನ, ಪ್ರತಿಭಾ ಪುರುಷೋತ್ತಮ ಇಲ್ಲೂರು, ನರಸಮ್ಮ ಮತ್ತು ಕಿಷ್ಟಯ್ಯ ಹೊಟೇಲ್ ಇತರರು ಇದ್ದರು. ಗ್ರಾಮ ಪಂಚಾಯಿತಿ ಸದಸ್ಯ ದಿಲೀಪ್ಸಾಬ್ ಇದ್ದರು.