ಚನ್ನರಾಯಪಟ್ಟಣ: `ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು~ ಎಂದು ಶಾಸಕ ಸಿ.ಎಸ್. ಪುಟ್ಟೇಗೌಡ ಗುರುವಾರ ಸಲಹೆ ನೀಡಿದರು.
ನವಿಲೆ ನಾಗೇಶ್ವರ ಏತ ನೀರಾವತಿ ಸಂಘದ ವತಿಯಿಂದ ತಾಲ್ಲೂಕಿನ ನವಿಲೆ ಗ್ರಾಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಏತ ನೀರಾವರಿ ಯೋಜನೆಯನ್ನು ನೀರೆತ್ತುವ ಯಂತ್ರದ ಗುಂಡಿಯನ್ನು ಒತ್ತುವ ಮೂಲಕ ಸಮರ್ಪಿಸಿ ಮಾತನಾಡಿದರು.
`ನೀರಿಗೆ ಮಹತ್ವವಿದೆ. ನೀರನ್ನು ಬಳಸಿಕೊಳ್ಳುವಾಗ ಬೇಜವಾಬ್ದಾರಿ ಸಲ್ಲದು. ಏತ ನೀರಾವರಿ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವುದರಿಂದ ಸಿಬ್ಬಂದಿ ಹೆಚ್ಚಳ ಸೇರಿ ಇದರ ನಿರ್ವಹಣೆಗೆ ಅನುಕೂಲವಾಗಲಿದೆ. ಇದಕ್ಕೆ ಅಗತ್ಯ ಸೌಲಭ್ಯ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು~ ಎಂದರು.
`ನುಗ್ಗೇಹಳ್ಳಿ ಕೆರೆಗೆ ನೀರು ಹರಿಸುವ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮನಾಯಕನಹಳ್ಳಿ ಬಳಿ ಹಾದು ಹೋಗಿರುವ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ಸಮರ್ಪಕ ನೀರು ಹರಿಯುತ್ತಿಲ್ಲ. ಕಾಲುವೆಯ ನೀರನ್ನು ಗ್ರಾಮದ ಕೆರೆಗೆ ಸರಾಗವಾಗಿ ತುಂಬಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಬೇಕು~ ಎಂದು ಹೇಳಿದರು.
ನವಿಲೆ ನಾಗೇಶ್ವರ ನೀರಾವರಿ ಸಂಘದ ಅಧ್ಯಕ್ಷ ಎ.ಈ. ಚಂದ್ರಶೇಖರ್ ಮಾತನಾಡಿ, `ಕಾಲುವೆಯಲ್ಲಿ ತುಂಬಿರುವ ಹೂಳು ತೆಗೆಸಬೇಕು. ಕೆರೆಗೆ ನೀರು ತುಂಬಿಸಲು ಸಂಪರ್ಕ ಕಲ್ಪಿಸಿರುವ ಕಾಲುವೆಗಳ ತೂಬನ್ನು ರೈತರು ಕೀಳಬಾರದು~ ಎಂದು ಮನವಿ ಮಾಡಿದರು.
ಎಚ್ಎಸ್ಎಸ್ಕೆ ಮಾಜಿ ಅಧ್ಯಕ್ಷ ಎಚ್.ಎಸ್. ಶ್ರೀಕಂಠಯ್ಯ, ಸಂತೇಶಿವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಳ್ಳೇಗೌಡ, ನೀರಾವರಿ ಸಂಘದ ಕಾರ್ಯದರ್ಶಿ ವೀರೇಶ್, ತುರುವೇಕೆರೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಅಶ್ವತ್ಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಕೆ.ಜವರೇಗೌಡ ಇದ್ದರು.