ಬೆಂಗಳೂರು: ಸಿವಿಲ್ ಪ್ರಕರಣವೊಂದರಲ್ಲಿ ತಮಗೆ ಬೇಕಿದ್ದ ವ್ಯಕ್ತಿಯನ್ನು ಪತ್ತೆ ಮಾಡಲು ಆತನ ಪುತ್ರಿಯನ್ನು ವಶಕ್ಕೆ ಪಡೆಯುವುದಾಗಿ `ಬೆದರಿಕೆ' ಒಡ್ಡಿದ್ದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರನ್ನು, `ನೀವೇನು ಮನುಷ್ಯರೋ ಅಥವಾ ಮೃಗಗಳೋ?' ಎಂದು ಹೈಕೋರ್ಟ್ ಬುಧವಾರ ಖಾರವಾಗಿ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರಿನ ಭಾನು ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್, `ಸಿವಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲು ನೀವು ಮುಂದಾಗುವುದು ಹೇಗೆ? ನೀವು ಸಿವಿಲ್ ನ್ಯಾಯಾಧೀಶರಾಗಿದ್ದು ಯಾವಾಗ?' ಎಂದು ಮೌಖಿಕವಾಗಿ ಪ್ರಶ್ನಿಸಿದರು.
ಗೋಪಾಲ್ ಎಂಬುವರು ಯಲಹಂಕ ಬಳಿಯ ಅಟ್ಟೂರು ಎಂಬಲ್ಲಿ ಚೆನ್ನಿಗಪ್ಪ ಎಂಬುವರಿಂದ ನಿವೇಶನ ಖರೀದಿಸಿದ್ದರು. ನಂತರದ ದಿನಗಳಲ್ಲಿ ಅದನ್ನು ಸುರೇಂದ್ರನಾಥ ಎಂಬುವರಿಗೆ 25 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ನಂತರ ಸೋಮಶೇಖರ್ ಎಂಬುವರು ಇದೇ ನಿವೇಶನವನ್ನು ಚೆನ್ನಿಗಪ್ಪ ಅವರಿಂದ ತಾವು ಖರೀದಿ ಮಾಡಿರುವುದಾಗಿ ಹೇಳಿಕೊಂಡರು.
ಇದರಿಂದ ವಿಚಲಿತರಾದ ಸುರೇಂದ್ರನಾಥ, ಹಣ ಹಿಂದಿರುಗಿಸುವಂತೆ ಗೋಪಾಲ್ ಅವರನ್ನು ಒತ್ತಾಯಿಸುತ್ತಿದ್ದರು. ಆದರೆ ಗೋಪಾಲ್ ಅವರು ಹಣ ಹಿಂದಿರುಗಿಸದ ಕಾರಣ, ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಇದರ ವಿಚಾರಣೆ ನಡೆಯುತ್ತಿದೆ.
ನಡುವೆ ಹೈಕೋರ್ಟ್ ಮೆಟ್ಟಿಲೇರಿದ ಗೋಪಾಲ್ ಪತ್ನಿಭಾನು, `ಪೊಲೀಸರು ಮನೆಗೆ ಬಂದು, 25 ಲಕ್ಷ ರೂಪಾಯಿ ಹಿಂದಿರುಗಿಸುವಂತೆ ಪದೇ ಪದೇ ಒತ್ತಡ ಹೇರುತ್ತಿದ್ದಾರೆ. ಗೋಪಾಲ್ ಅವರು ಎಲ್ಲಿದ್ದಾರೆ ಎಂಬುದನ್ನು ತಿಳಿಸದಿದ್ದರೆ, ಪುತ್ರಿಯನ್ನು ಠಾಣೆಗೆ ಕರೆದೊಯ್ಯುವುದಾಗಿ ಬೆದರಿಕೆ ಒಡ್ಡಿದ್ದಾರೆ. ಆಕೆ ಬಿ.ಕಾಂ ಪರೀಕ್ಷೆಗೆ ಹಾಜರಾಗಬೇಕಿದೆ' ಎಂದು ಅರ್ಜಿ ಸಲ್ಲಿಸಿದರು.
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಜೀರ್, `ಈ ಪ್ರಕರಣವು ಸಿವಿಲ್ ಸ್ವರೂಪದ್ದು. ಇದರಲ್ಲಿ ಮಧ್ಯಪ್ರವೇಶ ಮಾಡಲು ಸಿಸಿಬಿ ಪೊಲೀಸರಿಗೆ ಯಾವುದೇ ಅಧಿಕಾರ ಇಲ್ಲ. ಭಾನು ಅವರ ಕುಟುಂಬದ ಸದಸ್ಯರ ತಂಟೆಗೆ ಸಿಸಿಬಿ ಪೊಲೀಸರು ಹೋಗಬಾರದು. ಅವರ ಪುತ್ರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು' ಎಂದು ಆದೇಶಿಸಿದರು.
ಭಾನು ಅವರು ತಮ್ಮ ಸಂಕಷ್ಟ ಹೇಳಿಕೊಂಡ ನಂತರ, ನ್ಯಾಯಮೂರ್ತಿಗಳು ಸಿಸಿಬಿ ಅಧಿಕಾರಿ ಜನಾರ್ದನ್ ಅವರನ್ನು ಮೂರು ತಿಂಗಳು ಅಮಾನತಿನಲ್ಲಿ ಇಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಮುಂದಾದರು. ಆದರೆ ಅಧಿಕಾರಿಯ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿ, ನಿರ್ಧಾರ ಕೈಬಿಟ್ಟರು.
ಈ ಪ್ರಕರಣದ ಕುರಿತು ನಗರ ಪೊಲೀಸ್ ಆಯುಕ್ತರು ವರದಿ ಸಿದ್ಧಪಡಿಸಿ, ಆರು ವಾರಗಳಲ್ಲಿ ಕೋರ್ಟ್ಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ವಿಚಾರಣೆ ಮುಂದೂಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.