ಚಳ್ಳಕೆರೆ: ಪಟ್ಟಣದ ಸೋಮಗುದ್ದು ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸುಮಾರು 1.5ಕೋಟಿ ವೆಚ್ಚದ ನ್ಯಾಯಾಲಯ ಇದೇ ಫೆ. 5ರಂದು ಶನಿವಾರ ಉದ್ಘಾಟನೆ ಆಗಲಿದೆ ಎಂದು ಇಲ್ಲಿನ ಹಿರಿಯ ಸಿವಿಲ್ ವಿಭಾಗದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ತಿಳಿಸಿದರು.ಪಟ್ಟಣದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಸಜ್ಜಿತ ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸಿದೆ ಎಂದರು.
ಇದುವರೆಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ, ಕಿರಿಯ ವಿಭಾಗದ ನ್ಯಾಯಾಲಯದ ಕಲಾಪಗಳು ಇನ್ನು ಮುಂದೆ ಹೊಸ ಕಟ್ಟಡದಲ್ಲಿ ಆರಂಭಿಸಲಾಗುವುದು ಎಂದರು.
ಫೆ. 5ರಂದು ನಡೆಯುವ ನೂತನ ನ್ಯಾಯಾಲಯದ ಉದ್ಘಾಟನೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜವ್ವಾದ್ ರಹೀಮ್ ನೆರವೇರಿಸುವರು.
ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ಕುಮಾರ್, ಹೈಕೋರ್ಟ್ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ಎಲ್. ನಾರಾಯಣ ಸ್ವಾಮಿ, ಚಿತ್ರದುರ್ಗ ಲೋಕಸಭಾ ಸದಸ್ಯ ಜಿ. ಜನಾರ್ದನ ಸ್ವಾಮಿ ಮತ್ತು ಮೊಳಕಾಲ್ಮುರು ಶಾಸಕ ಎನ್.ವೈ. ಗೋಪಾಲಕೃಷ್ಣ ಭಾಗವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ತಿಪ್ಪೇಸ್ವಾಮಿ ವಹಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ಅಶ್ವತ್ಥ್ನಾಯಕ, ಉಪಾಧ್ಯಕ್ಷ ವಿಶ್ವನಾಥ್ ಹಾಗೂ ಲೋಕೋಪಯೋಗಿ ಎಂಜಿನಿಯರ್ ರಮೇಶ್ ಉಪಸ್ಥಿತರಿದ್ದರು.