ಧಾರವಾಡ: ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಕರ್ನಾಟಕ ವಿಶ್ವವಿದ್ಯಾಲಯವು ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್)ಯ ಇಂಗ್ಲಿಷ್ ವಿಷಯದ ಮೂರನೇ ಪ್ರಶ್ನೆಪತ್ರಿಕೆಯಲ್ಲಿ ಒಂದೇ ಪ್ರಶ್ನೆ ಎರಡು ಬಾರಿ ಪ್ರಕಟವಾಗಿ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿತು.
`ಜೆ 3013' ಶ್ರೇಣಿಯ ಪ್ರಶ್ನೆಪತ್ರಿಕೆಯ 15 ಹಾಗೂ 72ನೇ ಪ್ರಶ್ನೆಗಳು ಒಂದೇ ರೀತಿಯಾಗಿವೆ. `ಈ ಕೆಳಗಿನ ಯಾವ ಹೇಳಿಕೆಯು ಸಂರಚನಾವಾದೋತ್ತರ ಸಾಹಿತ್ಯಕ್ಕೆ ಸಂಬಂಧಿಸಿಲ್ಲ' ಎಂದು ಪ್ರಶ್ನೆ ಕೇಳಲಾಗಿದ್ದು, ಎ, ಬಿ, ಸಿ ಹಾಗೂ ಡಿ ಹೇಳಿಕೆಗಳು ಎರಡೂ ಕಡೆ ಒಂದೇ ರೀತಿಯಾಗಿವೆ. ಈ ಪ್ರಶ್ನೆ ಎರಡು ಬಾರಿ ಪ್ರಕಟವಾದದ್ದನ್ನು, ಇಂಗ್ಲಿಷ್ ವಿಷಯದಲ್ಲಿ ನೆಟ್ ಪರೀಕ್ಷೆ ಬರೆದ ಆರ್.ಉಮೇಶ್ `ಪ್ರಜಾವಾಣಿ' ಗಮನಕ್ಕೆ ತಂದಿದ್ದು, ಇದಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಹೆಚ್ಚುವರಿ ಅಂಕಗಳನ್ನು ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಯುಜಿಸಿ ನೆಟ್/ ಜೆಆರ್ಎಫ್ ಪರೀಕ್ಷಾ ಸಂಯೋಜಕ ಡಾ.ಜೆ.ಎಂ.ನಾಗಯ್ಯ, `ಯಾವ ವಿದ್ಯಾರ್ಥಿಯೂ ಈ ಬಗ್ಗೆ ನಮಗೆ ಲಿಖಿತ ದೂರು ಸಲ್ಲಿಸಿಲ್ಲ. ವಿವರಣೆಯೊಂದಿಗೆ ದೂರು ನೀಡಿದರೆ ಅದನ್ನು ಯುಜಿಸಿಗೆ ಕಳಿಸುತ್ತೇವೆ' ಎಂದರು.
ಇದಲ್ಲದೇ, ಪರೀಕ್ಷೆ ಬರೆಯಲು ಕಳೆದ ವರ್ಷದ ಪ್ರವೇಶಪತ್ರದೊಂದಿಗೆ ಬಂದ ಇಬ್ಬರು ಅಭ್ಯರ್ಥಿಗಳಿಗೆ ಸಮಯ ಮೀರಿದ್ದರಿಂದ ಹಾಗೂ ಸೂಕ್ತ ಪ್ರವೇಶಪತ್ರ ಇಲ್ಲದ ಹಿನ್ನೆಲೆಯಲ್ಲಿ ಕೆಸಿಡಿ ಕಾಲೇಜಿನ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಅವಕಾಶ ನಿರಾಕರಿಸಿದರು.