ಗುಬ್ಬಿ: ಇಳಿ ವಯಸ್ಸಿನ ಹಿರಿಯ ಚೇತನಗಳಿಗೆ ನೆಮ್ಮದಿ ಜೀವನ ಇಂದಿನ ಸಮಾಜದಲ್ಲಿ ಕಾಣದಾಗಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಬಿ.ಎನ್.ಲಾವಣ್ಯಲತಾ ವಿಷಾದಿಸಿದರು.
ಗುಬ್ಬಿಯ ಜೀವನ ಸಂಧ್ಯಾ ವೃದ್ಧಾಶ್ರಮದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಬಾಲಾಜಿ ಟ್ರಸ್ಟ್ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಈಚೆಗೆ ನಡೆದ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಾಂಧವ್ಯ ಮರೆತ ಯುವ ಪೀಳಿಗೆ ಹಿರಿಯರ ಪೋಷಣೆ ಮಾಡಬೇಕಾಗಿರುವುದು ಕರ್ತವ್ಯ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ನಾಗರಿಕರ ವೇದಿಕೆಯ ಜಿಲ್ಲಾ ಸಂಚಾಲಕ ಎಸ್.ಐ.ಮಾಲೂರಪ್ಪ ಮಾತನಾಡಿದರು. ವಕೀಲ ಚನ್ನಬವಸವಯ್ಯ ಹಿರಿಯರಿಗೆ ಸರ್ಕಾರದಿಂದ ಬರುವ ಸವಲತ್ತು ಬಗ್ಗೆ ಉಪನ್ಯಾಸ ನೀಡಿದರು.
ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಅನ್ನಪೂರ್ಣಕ್ಕ, ಶೋಭಕ್ಕ, ನಿವೃತ್ತ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಸಿಂಧ್ಯಾ, ಬಾಲಾಜಿ ಟ್ರಸ್ಟ್ನ ಕಮಲಮ್ಮ ಇತರರು ಉಪಸ್ಥಿತರಿದ್ದರು.