ಬೆಂಗಳೂರು: ರಾಜಾಜಿನಗರದ ಆರ್ಟಿಒ ವಾಣಿಜ್ಯ ಸಂಕೀರ್ಣದಲ್ಲಿ ಸ್ಥಾಪಿಸಿರುವ ‘ನೆಮ್ಮದಿ ಕೇಂದ್ರ’ದ ಕಾರ್ಯಾರಂಭಕ್ಕೆ ಬೆಂಗಳೂರು ಜಲಮಂಡಳಿ ಸಚಿವ ಮತ್ತು ಕ್ಷೇತ್ರದ ಶಾಸಕ ಎಸ್.ಸುರೇಶ್ಕುಮಾರ್ ಇತ್ತೀಚೆಗೆ ಚಾಲನೆ ನೀಡಿದರು.ಜಾತಿ ಮತ್ತು ಆದಾಯ, ವಿಧವಾ ವೇತನ, ವಾಸಸ್ಥಳ, ಜನನ- ಮರಣ ದೃಢೀಕರಣ, ಮ್ಯುಟೇಶನ್, ಪಹಣಿ ಸೇರಿದಂತೆ 43 ವಿವಿಧ ಪ್ರಮಾಣ ಪತ್ರಗಳನ್ನು ಒಂದೇ ಸೂರಿನಡಿ ವಿತರಿಸುವ ಕೇಂದ್ರ ಇದಾಗಿದೆ. ಈ ಕೇಂದ್ರದ ನಿರ್ವಹಣೆಯನ್ನು ವಿದ್ಯುನ್ಮಾನ (ಇ) ಆಡಳಿತ ಇಲಾಖೆ ನೋಡಿಕೊಳ್ಳಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ನಗರದ ಕೇಂದ್ರ ಭಾಗದಲ್ಲಿ ನೆಮ್ಮದಿ ಕೇಂದ್ರವನ್ನು ಆರಂಭಿಸುವ ಮೂಲಕ ಅಂಗವಿಕಲರು, ವೃದ್ಧರು ಮತ್ತು ದುರ್ಬಲವರ್ಗದ ಜನರು ತಮಗೆ ಅಗತ್ಯವಿರುವ ಪ್ರಮಾಣ ಪತ್ರಗಳು ಮತ್ತು ಇತರ ಸೇವೆಗಳಿಗಾಗಿ ಅಲೆದಾಡುವುದನ್ನು ತಪ್ಪಿಸಲಾಗಿದೆ’ ಎಂದರು.‘ನಗರದ ಹೃದಯ ಭಾಗದಲ್ಲಿ ಇದುವರೆಗೂ ನೆಮ್ಮದಿ ಕೇಂದ್ರ ಇರಲಿಲ್ಲ. ಈ ಭಾಗದ ಪ್ರಥಮ ಕೇಂದ್ರ ಇದಾಗಿದ್ದು, ಈ ಕೇಂದ್ರದಲ್ಲಿ ಬಿಎಸ್ಎನ್ಎಲ್ ಮೊಬೈಲ್, ಎಲ್ಐಸಿ, ಟಾಟಾ ಎಲ್ಐಜಿ ವಿಮೆ ಪಾವತಿಗೂ ಸಹ ಅವಕಾಶ ಕಲ್ಪಿಸಲಾಗಿದೆ’ ಎಂದು ಅವರು ಹೇಳಿದರು.ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ರಂಗಣ್ಣ, ಪದ್ಮರಾಜ್, ಸದಸ್ಯರಾದ ರವೀಂದ್ರ, ಜಯರತ್ನ, ಮಂಜುನಾಥ್, ಶಕೀಲಾ, ಕೃಷ್ಣಪ್ಪ, ಇ- ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿದ್ಯಾಶಂಕರ್ ಈ ಉಪಸ್ಥಿತರಿದ್ದರು.