ಹಳೇಬೀಡು: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ ನಾಗರಿಕರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಆರ್. ನಾಗರಾಜು ಹೇಳಿದರು.
ಗ್ರಾಮ ಪಂಚಾಯಿತಿ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ರಾಜನಶಿರಿಯೂರಲ್ಲಿ ಗುರುವಾರ ನಡೆದ ಕಾನೂನು ಅರಿವು ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಶುಲ್ಕ ಪಾವತಿಸಬೇಕಿಲ್ಲ.ಕಾನೂನು ಜ್ಞಾನ ಹೊಂದಿದ ವನು ಉತ್ತಮ ನಾಗರಿಕ ಎಂದರು.
ವಕೀಲ ಸಿ.ಎಂ. ನಿಂಗರಾಜು ಮಾತನಾಡಿ, ಕಾನೂನಿನ ಉಚಿತ ಸಲಹೆಗೆ ಕಾನೂನು ಚಿಕಿತ್ಸಾಲಯ ರಚನೆಯಾಗಿದೆ. ಇಲ್ಲಿ ವಕೀಲರು ಕಾನೂನಿನ ಮಾಹಿತಿ ಸಾರ್ವಜನಿಕರಿಗೆ ನೀಡುತ್ತಾರೆ. ಸಲಹೆ ಪಡೆಯಲು ಮಾತ್ರ ಚಿಕಿತ್ಸಾಲಯದಲ್ಲಿ ಅವಕಾಶವಿದೆ. ಬೇಲೂರಿನ ನ್ಯಾಯಾಲಯ, ಪುರಸಭೆ, ತಾಲ್ಲೂಕು ಕಚೇರಿ, ಹಳೇ ಬೀಡು ಹಾಗೂ ಹಗರೆ ಗ್ರಾ.ಪಂ.ನಲ್ಲಿ ಕಾನೂನು ಚಿಕಿತ್ಸಾಲಯ ತೆರೆಯ ಲಾಗಿದೆ. ಹಂತ ಹಂತವಾಗಿ ಪ್ರತಿ ಗ್ರಾ.ಪಂ.ನಲ್ಲೂ ಚಿಕಿತ್ಸಾಲಯ ಆರಂಭವಾಗುತ್ತದೆ ಎಂದರು.
ವಕೀಲ ಜಮೀಲ್ ಅಹಮದ್ ವರದಕ್ಷಿಣೆ ನಿಷೇಧ ಕಾಯ್ಡೆಯ ಬಗ್ಗೆ, ಎ.ಬಿ. ಶಂಕರಾನಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಉಪನ್ಯಾಸ ಮಂಡಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ದ್ರಾಕ್ಷಾಯಿಣಮ್ಮ ಅಧ್ಯಕ್ಷತೆ ವಹಿಸಿದ್ದರು. ಎಪಿಪಿ ಪ್ರಕಾಶ್ ಸುಂಕದ, ವಕೀಲರ ಸಂಘದ ಅಧ್ಯಕ್ಷ ಸಿ.ಎಂ. ಚಂದ್ರೇಗೌಡ ಮಾತನಾಡಿದರು. ವಕೀಲರಾದ ಸಿ.ಸಿ. ಸೋಮೇಗೌಡ, ಬಿ.ಎಸ್.ಜಿ. ಸ್ವಾಮಿ, ಮಮತ, ಕೆ.ವಿ. ರಮೇಶ್ ಇದ್ದರು.
ಪಿಡಿಒ ಸಿದ್ದಲಿಂಗಪ್ಪಸರೂರು ಸ್ವಾಗತಿಸಿದರು. ಮುಖ್ಯಶಿಕ್ಷಕ ಕೆ.ಆರ್. ಉದಯ್ ಕುಮಾರ್ ನಿರೂಪಿಸಿದರು.
ಅರಸೀಕೆರೆ ವರದಿ: ಪ್ರತಿಯೊಬ್ಬರೂ ಕಾನೂನು ಚೌಕಟ್ಟಿನೊಳಗೆ ಜೀವನ ಸಾಗಿಸಬೇಕು. ಕಾನೂನು ಮೀರಿ ನಡೆದರೆ ಶಿಕ್ಷೆ ಖಚಿತ ಎಂದು ಅರಸೀಕೆರೆ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಎನ್.ಆರ್. ಚನ್ನಕೇಶವ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಾಗಸಮುದ್ರ ಗ್ರಾಮದ ಬಸವೇಶ್ವರ ದೇವಾಲಯ ಮುಂಭಾಗದಲ್ಲಿ ಕಣಕಟ್ಟೆ ವಿದ್ಯಾರಣ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿರುವ ಎನ್ಎಸ್ಎಸ್ ಶಿಬಿರದಲ್ಲಿ ಉಚಿತ `ಕಾನೂನು ಅರಿವು~ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪರ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಕುರುಬೆಟ್ ಮಾತನಾಡಿದರು. ವಿದ್ಯಾರಣ್ಯ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಕೆ.ಎ. ನಾಗೇಶ್ರಾವ್ ಮಾತನಾಡಿದರು.
ಪ್ರಾಂಶುಪಾಲ ಕೆ.ಎ. ಶಶಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನ್ಯೂಟೆಕ್ ಸೋಲಾರ್ನ ಎನ್.ಜಿ. ಮರುಳಸಿದ್ದ ಸ್ವಾಮಿ, ಶಿಬಿರಾಧಿಕಾರಿ ಎಚ್.ಕೆ. ಹನುಮೇಶ್, ದೈಹಿಕ ಶಿಕ್ಷಕ ಎನ್. ಎಸ್. ಬಸವರಾಜು, ಶಿಬಿರದ ಮೇಲ್ವಿಚಾರಕ ಎನ್.ಬಿ. ರೇವಣ್ಣ ಇದ್ದರು.
ಆಲೂರು ವರದಿ: ಆಹಾರ, ನೀರು ಗಾಳಿಯಷ್ಟೇ ಕಾನೂನು ಜ್ಞಾನ ಅಗತ್ಯ. ಕಾನೂನು ಪಾಲನೆ ಪ್ರತಿ ನಾಗರಿಕರ ಕರ್ತವ್ಯ ಎಂದು ಇಲ್ಲಿನ ಜಿಎಂಎಫ್ಸಿ ನ್ಯಾಯಲಯದ ನ್ಯಾಯಾದೀಶ ವಿ. ಹನುಮಂತಪ್ಪ ಹೇಳಿದರು.
ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಆವರಣದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.
ನಿತ್ಯದ ಜೀವನದಲ್ಲಿ ನಡೆಯುವ ಘಟನೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾನೂನು ಅರಿವು ಮುಖ್ಯ. ಇದಕ್ಕಾಗಿಯೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಮಹೇಶ್ ಮಾತನಾಡಿ, ಸಂವಿಧಾನ ಜನಸಾಮಾನ್ಯರಿಗೆ ಕೆಲವು ಹಕ್ಕುಗಳ ನೀಡಿದೆ. ಅವುಗಳ ಮಾಹಿತಿ ತಿಳಿಸಲು ಸಂಚಾರಿ ಜನತಾ ನ್ಯಾಯಾಲಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಹಿರಿಯ ವಕೀಲ ಕೆ. ನಾಗರಾಜ್, ಕೆ.ಎನ್. ಮಹೇಂದ್ರ ಮಾತಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಬಿ. ಮಂಜೇಗೌಡ, ಕಾರ್ಯದರ್ಶಿ ಕೆ.ಜಿ. ನಾಗರಾಜ್, ವಿನಯರಾಣಿ, ಇತರರು ಇದ್ದರು. ಜೀವನ್ ಪ್ರಸಾದ್ ಸ್ವಾಗತಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.