ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿನ ನಿರೀಕ್ಷೆಯಲ್ಲಿ ಏರೋಬಿಕ್ಸ್ ಟ್ರಯೋ

Last Updated 2 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಪ್ರತಿದಿನ ತರಕಾರಿ ಮಾರಾಟ ಮಾಡಿ ಬರುವ ದುಡ್ಡಿನಲ್ಲಿಯೇ ಆ ಸಂಸಾರ ಸಾಗಬೇಕು. ಅಂತಹ ಮನೆಯ ಶ್ರೀಮಂತ ಕ್ರೀಡಾ ಪ್ರತಿಭೆಗೆ ಈಗ ಸುವರ್ಣಾವಕಾಶ  ಒಲಿದು ಬಂದಿದೆ. ಅದಕ್ಕಾಗಿ ಧನಲಕ್ಷ್ಮೀ ಮಾತ್ರ ಇನ್ನೂ ಒಲಿದಿಲ್ಲ!

ಆರ್‌ಎಂಸಿಯಲ್ಲಿ ತರಕಾರಿ ವ್ಯಾಪಾರಸ್ಥರಾಗಿರುವ ಶ್ರೀಕಂಠಪ್ರಸಾದ್ ಅವರ ಮಗಳು ಗಗನ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಸ್ಪೋರ್ಟ್ಸ್ ಏರೋಬಿಕ್ಸ್ ಅಂಡ್ ಫಿಟ್‌ನೆಸ್ (ಎಫ್‌ಐಎಸ್‌ಎಎಫ್) ಸಂಸ್ಥೆ ನಡೆಸುವ ಏರೋಬಿಕ್ಸ್ `ವರ್ಲ್ಡ್ ಚಾಂಪಿಯನ್‌ಷಿಪ್-2011~ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಆದರೆ ಅದಕ್ಕಾಗಿ 1.20 ಲಕ್ಷ ರೂಪಾಯಿ ಹೊಂದಿಸಿಕೊಳ್ಳುವ ದೊಡ್ಡ ಸವಾಲು ಎದುರಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಗಗನಳೊಂದಿಗೆ ಆಯ್ಕೆಯಾಗಿರುವ ಇನ್ನಿಬ್ಬರು ವಿದ್ಯಾರ್ಥಿಗಳಾದ ಸ್ಪಂದನ ಮತ್ತು ನಿತಿನ್ ಕೂಡ ಮಧ್ಯಮವರ್ಗದಿಂದಲೇ ಬಂದವರು. ಆಸಕ್ತಿಗಾಗಿ ಏರೊಬಿಕ್ಸ್‌ಗೆ ಸೇರಿ ವಿಶ್ವಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಪ್ರತಿಭೆಗಳಾಗಿ ಬೆಳೆದಿರುವ ಇವರ ಈಗ ಸಹಾಯಹಸ್ತಕ್ಕಾಗಿ      ಕಾಯುತ್ತಿದ್ದಾರೆ.

ಅದರಲ್ಲೂ ಜಗದಾಂಬ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವ ಗಗನಳ ಕುಟುಂಬ ತೀರಾ ಸಂಕಷ್ಟದಲ್ಲಿದೆ. ಮಗಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದೆ ದೊಡ್ಡ ಸಾಧನೆ. ಶಾಲೆ ಬಿಟ್ಟು ಪಠ್ಯೇತರ ಚಟುವಟಿಕೆಯಲ್ಲಿ ಮಗಳನ್ನು ತೊಡಗಿಸಬೇಕೆಂಬ ತಾಯಿಯ ಹಂಬಲದಿಂದ ವಿದ್ಯಾರಣ್ಯಪುರಂ ತರಬೇತುದಾರ ರಘು ಅವರ ಡ್ಯಾನ್ಸ್ ಕ್ಲಾಸ್‌ಗೆ ಮಗಳನ್ನು ಸೇರಿಸಿದರು. ಈಕೆಯನ್ನು ಸ್ಪರ್ಧೆಗೆ ಕಳುಹಿಸಿಕೊಡಲು ಹಣ ಹೊಂದಿಸಲಾಗದೆ ಪರಿತಪಿಸುತ್ತಿದ್ದಾರೆ. 

 ಗಗನಳೊಂದಿಗೆ ಆಯ್ಕೆಯಾದ ಸಂತ ಮೇರಿ ಶಾಲೆಯ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ  ಸ್ಪಂದನ ಹಾಗೂ ಚಿನ್ಮಯ ಶಾಲೆಯ 5ನೇ ತರಗತಿ ವಿದ್ಯಾರ್ಥಿ ನಿತಿನ್ ಓದಿನ ಜೊತೆಗೆ ನಿತ್ಯ ನಾಲ್ಕು ಗಂಟೆಗಳ ಅಭ್ಯಾಸ ಮಾಡಿ ಈ ಕ್ರೀಡೆಯನ್ನು ಕರಗತ ಮಾಡಿಕೊಂಡಿದ್ದಾರೆ. ಎರಡು ನಿಮಿಷ ಅವಧಿಯಲ್ಲಿ ಇವರು ಪ್ರದರ್ಶನ ನೀಡಬೇಕಿದ್ದು, ಅದಕ್ಕಾಗಿ ನಿತ್ಯ ಅಭ್ಯಾಸ ಮಾಡುತ್ತಿದ್ದಾರೆ.

2011ರ ಏಪ್ರಿಲ್ 26-30 ರವರೆಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ 5ನೇ ರಾಷ್ಟ್ರೀಯ ಸ್ಪೋರ್ಟ್ಸ್ ಏರೋಬಿಕ್ಸ್ ಮತ್ತು ಫಿಟ್‌ನೆಸ್ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ಈ ಮೂವರು `ಟ್ರಯೋ~ ಗುಂಪಿನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕವನ್ನು ಬಾಚುವ ಮೂಲಕ ಆಸ್ಟ್ರೇಲಿಯದ ಸಿಡ್ನಿಯಲ್ಲಿ ಬರುವ ಅಕ್ಟೋಬರ್ 18 ರಿಂದ 24 ರವರೆಗೆ  ನಡೆಯಲಿರುವ `ವರ್ಲ್ಡ್ ಚಾಂಪಿಯನ್‌ಷಿಪ್-2011~ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಭಾರತ ತಂಡಕ್ಕೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಹರಿಯಾಣ, ತಮಿಳುನಾಡು ರಾಜ್ಯಗಳ ಆಟಗಾರರೂ ಆಯ್ಕೆಯಾಗಿದ್ದಾರೆ. ದೇಶದಲ್ಲಿ ಒಟ್ಟು 19 ಅಭ್ಯರ್ಥಿಗಳು ವಿಶ್ವ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಇವರಲ್ಲಿ ಮೂವರು ಸ್ಪರ್ಧಿಗಳು ಮೈಸೂರಿಗರೇ ಎಂಬುದು ಹೆಮ್ಮೆಯ ಸಂಗತಿ.

ಈ ಮೂವರು ಮಕ್ಕಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕುವಂತೆ ಮಾಡಿದವರು ತರಬೇತುದಾರ ಆರ್.ರಘು, ವಿಜಯನಗರ 3ನೇ ಹಂತದಲ್ಲಿ `ಕಟ್ಸ್ ಅ್ಯಂಡ್ ಕರ್ವ್~ ಡ್ಯಾನ್ಸ್ ಕ್ಲಾಸ್ ಸಹ ನಡೆಸುತ್ತಿದ್ದಾರೆ. ಸಹ 18 ಮೇಲ್ಪಟ್ಟ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಮೂವರು ಶಿಷ್ಯರಿಗೆ ವಿಶ್ವ ಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸುವ ಜೊತೆಗೆ ತಾವೂ ಸ್ಪರ್ಧೆಗೆ ಅಭ್ಯಾಸದಲ್ಲಿ ತೊಡಗಿದ್ದಾರೆ. 

 ಆದರೆ ಈಗ ವಿಮಾನ ವೆಚ್ಚ, ಆಹಾರ, ಲಾಡ್ಜಿಂಗ್, ಟೂರ್ನ್‌ಮೆಂಟ್ ಕಿಟ್ ಸೇರಿದಂತೆ ತಲಾ ರೂ.1.20 ಲಕ್ಷ ವೆಚ್ಚವಾಗಲಿದೆ. ತರಬೇತುದಾರ ಸೇರಿದಂತೆ ನಾಲ್ವರಿಗೆ ಕನಿಷ್ಠ 5 ಲಕ್ಷ ರೂಪಾಯಿ ಬೇಕು. ಈ ಮಕ್ಕಳ ಪಾಲಕರು ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ದಾನಿಗಳ ಮೊರೆ ಹೋದರೂ ಫಲಪ್ರದವಾಗಿಲ್ಲ. ಹಾಯ ಮಾಡಲು ಇಚ್ಛಿಸುವವರು ಶ್ರೀಕಂಠ್ ಪ್ರಸಾದ್ (ಮೊ: 93796 03853), ತರಬೇತುದಾರ ರಘು (ಮೊ: 9900661228) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT