ಎಚ್.ತಿಮ್ಮಾಪುರ(ಕಡೂರು): ‘ಈ ದೇವೇಗೌಡ ನಡೆಸುತ್ತಿರುವ ರೈತಪರ ಹೋರಾಟ ಶೋಕಿಗಾಗಿ ಅಲ್ಲ, ಈ ದೇಹ ನೆಲಕ್ಕುರುಳುವವರೆಗೆ ರೈತಪರ ಹೋರಾಟ ಮುಂದುವರೆಸುತ್ತೇನೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗುಡುಗಿದರು.
ಕಡೂರು ತಾಲ್ಲೂಕು ಎಚ್. ತಿಮ್ಮಾಪು ರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
‘ಜೆಡಿಎಸ್ ನಾಶ ಮಾಡುವುದೇ ಕಾಂಗ್ರೆಸ್ನ ಪ್ರಮುಖ ಗುರಿಯಾಗಿದೆ, ಅದಕ್ಕೆ ಪೂರಕವಾಗಿ ಆ ಪಕ್ಷದ ರಾಜ್ಯಾಧ್ಯಕ್ಷರು ನನ್ನ ಬೆನ್ನುಮೂಳೆ ಮುರಿಯವ ಮಾತನ್ನಾಡಿದ್ದರು, ಅದು ಸಾಧ್ಯವೇ? ಎಂದು ಪ್ರಶ್ನಿಸಿದ ದೇವೇಗೌಡರು 1973ರಲ್ಲಿಯೇ ಕಾಂಗ್ರೆಸ್ ವಿರೋಧಿಸಿ ಜನ ಜೆಪಿ ಚಳವಳಿ ಮತ್ತು ಜನತಾಪಕ್ಷವನ್ನು ಬೆಂಬಲಿಸಿದ್ದರು, ಆದರೆ ನಮ್ಮಂತಹ ಕೆಲ ಸ್್ವಾರ್ಥ ರಾಜಕಾರಣಿಗಳ ಹಿತಕ್ಕೆ ಚಳವಳಿ ಬಲಿಯಾಗಿ ಸಂಘಟನೆ ಹರಿದು ಹಂಚಿಹೋಯ್ತು. ಇತ್ತೀಚೆಗೆ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಜನರ ಮನಸ್ಥಿತಿ ಏನು ಎಂಬುದು ಸೂಚ್ಯವಾಗಿ ಬೆಳಕಿಗೆ ಬಂದಿದೆ ಮತ್ತು ದಿಲ್ಲಿಯಲ್ಲಿ ಕಾಂಗ್ರೆಸ್ನ್ನು ಧೂಳೀಪಟ ಮಾಡಿದ ಅರವಿಂದ ಕೇಜ್ರಿವಾಲರನ್ನು ಅಭಿನಂದಿ ಸುವುದಾಗಿ’ ಅವರು ನುಡಿದರು.
ರಾಜ್ಯದಲ್ಲಿ ಅಡಿಕೆ ಮತ್ತು ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ, ಅವರ ನೆರವಿಗೆ ಸೂಕ್ತವಾಗಿ ಸ್ಪಂದಿಸುವಂತೆ ಕೇಂದ್ರ ಕೃಷಿ ಶರದ್ಪವಾರ್ರನ್ನು ಪತ್ರ ಬರೆದು ಕೋರಿದ್ದು ಅವರೂ ಸ್ಪಂದನೆಯ ಭರವಸೆ ನೀಡಿದ್ದಾರೆ. ಗೋರಖ್ಸಿಂಗ್ ಆಯೋಗ ನೀಡಿರುವ ವರದಿ ಕೇವಲ ಮಧ್ಯಂತರ ವರದಿಯಾಗಿದ್ದು ಕೇರಳಮಾದರಿಯಲ್ಲಿಯೇ ರಾಜ್ಯದ ರೈತರಿಗೆ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿ ಸಿದ್ದೇನೆ.
ರೈತರ ಹಿತ ಕಾಯುವುದು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ದಲ್ಲಿರುವ ಕಾಂಗ್ರೆಸ್ ನದ್ದಾಗಿದೆ. ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಬಳಿಕ ಸಕ್ಕರೆ ಕಾರ್ಖಾನೆಗಳಿಗೆ ಮೂರು ಸಾವಿರ ಕೋಟಿ ರೂ ಬಡ್ಡಿ ರಹಿತ ಸಾಲ ಕೊಡುವುದಾಗಿ ತಿಳಿಸಿದ್ದಾರೆ. ಇದು ಬಂಡವಾಳಶಾಹಿ ಮಾಲೀಕರಿಗೆ ವರ ದಾನವೇ ಹೊರತು ರೈತರಿಗೆ ಇದರಿಂದ ಕನಿಷ್ಟ ಉಪಯೋಗವಿ ದೆಯೇ ? ಎಂದು ಪ್ರಶ್ನಿಸಿದರು.
‘ನಾನು ಪತ್ರ ಬರೆದು ಮುಖ್ಯ ಮಂತ್ರಿಗಳಿಗೆ ರೈತಪರ ಸ್ಪಂದನೆಗೆ ಸಲಹೆ ನೀಡಲು ಹೋದರೆ ಇವರನ್ನು ಕೇಳಿ ಆಡಳಿತ ನಡೆಸಬೇಕೇ? ಎಂದು ವ್ಯಂಗ್ಯ ವಾಡುತ್ತಾರೆ, ಇನ್ನು ಮುಂದೆ ಸಲಹೆ ನೀಡುವ ಪತ್ರ ಬರೆಯುವ ವಿಧಾನವನ್ನೇ ಕೈಬಿಡಲು ಯೋಚಿ ಸಿದ್ದೇನೆ’ ಎಂದು ವಿಷಾದಿಸಿದರು.
ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಘೋಷಿಸಿವೆ, ಮುಂಬರುವ ದಿನಗಳಲ್ಲಿ ತೃತೀಯ ರಂಗಕ್ಕೆ ತಾವು ನೇತೃತ್ವ ವಹಿಸುವಿರೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ‘ ನಾನು ನೇತೃತ್ವ ವಹಿಸುವ ಸ್ಥಿತಿ ಇಲ್ಲ, ಮುಲಾಯಂ, ಲಾಲೂ ಪ್ರಸಾದ್ ಯಾದವ್ ಮುಂತಾದವರು ಆಯಾ ರಾಜ್ಯಗಳಲ್ಲಿ ಪ್ರಬಲರಿದ್ದು ದೇಶದ 130 ಕೋಟಿ ಜನರು ಚುಕ್ಕಾಣಿ ಯಾರು ಹಿಡಿಯಬೇಕು ಎಂಬುದನ್ನು ತೀರ್ಮಾನಿಸುತ್ತಾರೆ. ಇಂತಹ ಸ್ಥಳೀಯ ನಾಯಕರಿಗೆ ದಿಲ್ಲಿಯಲ್ಲಿ ತಮ್ಮನ್ನು ಬೆಂಬಲಿಸಲು ಬಂದ ಕಾಂಗ್ರೆಸ್ ಮತ್ತು ಬಿಜೆಪಿ ಸಹಯೋಗ ತಿರಸ್ಕರಿಸಿದ ಅರವಿಂದ ಕೇಜ್ರಿವಾಲ್ ಆದರ್ಶ ವಾಗಬೇಕು, ಅವರ ನಿಸ್ವಾರ್ಥ ಹೋರಾ ಟವನ್ನು ನಾನು ಮೆಚ್ಚುತ್ತೇನೆ ಎಂದರು.
‘ನನ್ನ ಲೋಕಸಭಾ ಕ್ಷೇತ್ರದ ಭಾಗವಾ ಗಿರುವ ಕಡೂರು ತಾಲ್ಲೂಕು ಶಾಶ್ವತ ನೀರಾವರಿ ಯೋಜನೆ ಹೊಂದಲು ವಿಫಲವಾಗಿದೆ ಎಂಬ ವಿಷಾದವಿದೆ, ಆದರೆ ಚೆಕ್ಡ್ಯಾಂ ನಿರ್ಮಾಣದ ಮೂಲಕ ನೀರಾವರಿಗೆ ಆದ್ಯತೆ, ನಬಾರ್ಡ್ನಿಂದ ರಸ್ತೆಗೆ ಹಣ ಬಿಡುಗಡೆ ಮುಂತಾದ ನನ್ನ ಕನಸಿನ ಕೂಸಿನಿಂದ ರಾಜ್ಯದ ರೈತರಿಗೆ ಸಾಕಷ್ಟು ಅನುಕೂಲ ವಾಗಿದೆ. ಪಿಎಂಜಿಎಸ್ವೈ ಬಿಟ್ಟರೆ ಯಾವ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿದೆ ಹೇಳಿ ಎಂದು ಮರುಪ್ರಶ್ನಿಸಿದ ಅವರು ಅಧಿಕಾರದಲ್ಲಿದ್ದ ಕೇವಲ 10 ತಿಂಗಳ ಅವಧಿಯಲ್ಲಿ ನಾನು ಏನು ಎಂದು ಸಾಬೀತು ಮಾಡಿದ್ದೇನೆ. ನನ್ನ ಹೋರಾಟ ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಎಂಬ ಟೀಕೆಗಳಿಗೆ ನಾನು ಉತ್ತರಿಸಲು ಹೋಗುವುದಿಲ್ಲ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಸ.ನಂ 70ರ ವಿಚಾರವಾಗಿ ಧರಣಿ ಕುಳಿತಾಗ ಚುನಾವಣೆ ಇತ್ತೇ? ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ, ಶಾಸಕ ವೈ.ಎಸ್.ವಿ.ದತ್ತ, ಜಿ.ಪಂ ಸದಸ್ಯ ಬಿ.ಪಿ.ನಾಗರಾಜ್, ತಾ.ಪಂ ಸದಸ್ಯ ನಿಂಗಪ್ಪ, ಜೆಡಿಎಸ್ ಮುಖಂಡರಾದ ಎಚ್.ಎಚ್.ದೇವರಾಜ್, ಭರತ್, ಕೋಡಿಹಳ್ಳಿ ಮಹೇಶ್ವರಪ್ಪ, ಸೀಗೇಹಡ್ಲು ಹರೀಶ್, ಭಂಡಾರಿ ಶ್ರೀನಿವಾಸ್ ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.