ಹುನಗುಂದ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಭೂಸವಕಳಿ ಮತ್ತು ಅತಿಯಾದ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ ಆತಂಕಕಾರಿ ಬೆಳವಣಿಗೆ ಯಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಧನ್ನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣ ದಲ್ಲಿ ನಡೆದ ಜಲಾನಯನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಸರ್ಗ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಿದೆ. ಆಹಾರ ಉತ್ಪಾದನೆ ಹೆಚ್ಚಳ, ಆರ್ಥಿಕ, ಸಾಮಾಜಿಕ ಸ್ವಾಸ್ಥ್ಯ ಹಾಗೂ ಪರಿಸರ ಕಾಪಾಡುವಲ್ಲಿ ತೋರುವ ನಿರ್ಲಕ್ಷ್ಯ ಒಳಿತಲ್ಲ. ಈ ಬಗ್ಗೆ ಸೂಕ್ತ ಕಾಳಜಿ ಅಗತ್ಯವಾಗಿದೆ. ಕೃಷಿಗಾಗಿ ನೆಲಜಲ ಸಂರಕ್ಷಣೆ ಮಾಡುತ್ತ ಸರ್ಕಾರದ ಯೋಜನೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ.ರಥೇಂದ್ರನಾಥ ಸುಗೂರ ಮತ್ತು ನಬಾರ್ಡ್ ಸಹಾಯಕ ಮಹಾನಿಬಂಧಕ ರವಿಕುಮಾರ ಮಾತನಾಡಿದರು.
ಜಿ.ಪಂ. ಸದಸ್ಯ ಈರಣ್ಣ ಬಂಡಿ, ಗ್ರಾ.ಪಂ. ಅಧ್ಯಕ್ಷ ಅಂದಾನೆಪ್ಪ ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಆರ್.ವಿ.ತೋಟದ, ಕೃಷಿ ಸಹಾಯಕ ನಿರ್ದೇಶಕ ಗೋಪಿ ನಾಯಕ, ತಾ.ಪಂ. ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ, ಸದಸ್ಯೆ ಶಂಕ್ರಮ್ಮ ಭಜಂತ್ರಿ, ಹುನಗುಂದ ಪ.ಪಂ ಅಧ್ಯಕ್ಷ ಬಸಪ್ಪ ಆಲೂರ ಭಾಗವಹಿಸಿದ್ದರು.