ಬೆಂಗಳೂರು: ರಾಜ್ಯದಲ್ಲಿ ಹೊಸ ಗಣಿ ನಿಕ್ಷೇಪಗಳನ್ನು ಗುರುತಿಸಿ, ನೆಲದಡಿಯ ಗಣಿಗಾರಿಕೆಗೆ ಅನುಮತಿ ನೀಡಬೇಕು ಎಂದು ಭಾರತೀಯ ಗಣಿಗಾರಿಕೆ ಉದ್ಯಮಗಳ ಒಕ್ಕೂಟ (ಎಫ್ಐಎಂಐ) ಆಗ್ರಹಿಸಿದೆ.
ನೆಲದಡಿಯ ಗಣಿಗಾರಿಕೆಯಿಂದ ಅರಣ್ಯ ಸಂಪತ್ತಿಗೆ ಮತ್ತು ಜೀವ ವೈವಿಧ್ಯತೆಗೆ ಕನಿಷ್ಠ ಪ್ರಮಾಣದ ಹಾನಿ ಉಂಟಾಗುತ್ತದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಬ್ಬಿಣ ಅದಿರಿನ ವಿಪುಲ ನಿಕ್ಷೇಪವಿದ್ದು, ಇಲ್ಲಿ ನೆಲದಡಿಯ ಗಣಿಗಾರಿಕೆಗೆ ಅವಕಾಶ ನೀಡಬೇಕು. ದಕ್ಷಿಣ ಆಫ್ರಿಕಾ ಮತ್ತು ಸ್ವೀಡನ್ಗಳಲ್ಲಿ ಈ ರೀತಿಯ ಗಣಿಗಾರಿಕೆ ಅನುಸರಿಸಲಾಗುತ್ತಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತಂತ್ರಜ್ಞಾನ ಮತ್ತು ತಜ್ಞರ ನೆರವು ಒದಗಿಸಲು `ಎಫ್ಐಎಂಐ~ ಸಿದ್ಧವಿದೆ ಎಂದು ಒಕ್ಕೂಟದ ದಕ್ಷಿಣ ವಲಯ ನಿರ್ದೇಶಕ ಡಿ.ವಿ ಪಿಚಮುತ್ತು ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಈಗಾಗಲೇ ರಾಜ್ಯದ ಎಲ್ಲ ಗಣಿ ಉದ್ಯಮಗಳ ಕುರಿತು ವರದಿ ಅಂತಿಮಗೊಳಿಸಿದ್ದು, ಎ,ಬಿ,ಸಿ ಶ್ರೇಣಿಗಳಲ್ಲಿ ವರ್ಗೀಕರಿಸಿದೆ. ಇದರಲ್ಲಿ ಎ ಮತ್ತು ಬಿ ವರ್ಗದಲ್ಲಿ ಬರುವ ಗಣಿ ಕಂಪೆನಿಗಳಿಗೆ ಗಣಿಗಾರಿಕೆಗೆ ಮರು ಪ್ರಾರಂಭಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಗಣಿಗಾರಿಕೆಯಿಂದ ಪರಿಸರದ ಮೇಲಾಗಿರುವ ಹಾನಿಯ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಗೂ (ಐಸಿಎಫ್ಆರ್ಇ) ಸುಪ್ರೀಂಕೋರ್ಟ್ ಸೂಚಿಸಿದೆ. ಬಳ್ಳಾರಿಯಲ್ಲಿ ಅಧ್ಯಯನ ನಡೆಸಿದ `ಐಸಿಎಫ್ಆರ್ಇ~ ತಂಡಕ್ಕೆ ಅಲ್ಲಿನ ಜಿಲ್ಲಾಡಳಿತ ತಪ್ಪು ಮಾಹಿತಿ ನೀಡಿದೆ ಎಂದು `ಎಫ್ಐಎಂಐ~ ದಕ್ಷಿಣ ವಲಯ ಅಧ್ಯಕ್ಷ ಬಸಂತ್ ಪೊದ್ದಾರ್ ದೂರಿದರು.
ರಾಜ್ಯದಲ್ಲಿ ಗಣಿಗಾರಿಕೆ ನಿಷೇಧಿಸಿರುವುದರಿಂದ ಇಡೀ ಉದ್ಯಮ ಬಿಕ್ಕಟ್ಟಿಗೆ ಸಿಲುಕಿದೆ. ಭಾಗಶಃ ಕಬ್ಬಿಣದ ಅದಿರು ಮತ್ತು ಉಕ್ಕು ತಯಾರಿಕೆ ಕಂಪೆನಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ರಾಜ್ಯ ಸರ್ಕಾರ ಶೀಘ್ರದಲ್ಲೇ ಗಣಿಗಾರಿಕೆಗೆ ಮರು ಪ್ರಾರಂಭಿಸಲು ಅನುಮತಿ ನೀಡಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.