ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯ ಹಿರೇಮಗಳೂರು ಬಡಾವಣೆಯ 3ನೇ ವಾರ್ಡ್ಗೆ ಶನಿವಾರ ಭೇಟಿ ನೀಡಿದ್ದ ಪೌರಾಯುಕ್ತ ನಾಗಭೂಷಣ್ ಒಳಚರಂಡಿ ನಿರ್ಮಾಣ ಕಾರ್ಯ, ಕುಡಿಯುವ ನೀರು ಸರಬರಾಜು, ನೈರ್ಮಲ್ಯ ವ್ಯವಸ್ಥೆಯನ್ನು ಪರಿಶೀಲಿಸಿ ಜನರಿಂದ ಸಮಸ್ಯೆ ಆಲಿಸಿದರು.
ಲಕ್ಷ್ಮೀಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ನಿವೇಶನ ವೀಕ್ಷಿಸಿದ ಆಯುಕ್ತರು, ಜನರೊಂದಿಗೆ ಸಮಾಲೋಚನೆ ನಡೆಸಿದರು. ಬಾಕ್ಸ್ ಚರಂಡಿ ಮತ್ತು ರಸ್ತೆ ಅಭಿವೃದ್ಧಿಪಡಿಸುವಂತೆ ಜನರು ಮಾಡಿಕೊಂಡ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಆಯುಕ್ತರು ಮುಂದಿನ ದಿನಗಳಲ್ಲಿ ಈ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
ಹಿರೇಮಗಳೂರಿನಲ್ಲಿ ಪಕ್ಕಾ ಮನೆ ಯೋಜನೆಯಡಿ ನಿರ್ಮಿಸಿರುವ ಮನೆಗಳನ್ನು ವೀಕ್ಷಿಸಿದರು. ಗುಂಡಿ ಹಟ್ಟಿಯಲ್ಲಿ ಚರಂಡಿ ಮತ್ತು ನೈರ್ಮಲ್ಯ ವ್ಯವಸ್ ಪರಿಶೀಲಿಸಿದರು. ಲಿಂಗಾಯತರ ಬೀದಿಯಲ್ಲಿ ಪಾದಯಾತ್ರೆಯಲ್ಲಿ ಸಾಗಿದ ಅವರು, ಹಲವರಿಂದ ಸಮಸ್ಯೆಗಳನ್ನು ಆಲಿಸಿದರು. ಒಂದೊಂದು ಮನೆಗೆ ಎರಡು ಮೂರು ನಲ್ಲಿಗಳನ್ನು ಹಾಕಿಸಿಕೊಂಡಿದ್ದಾರೆ ಎಂಬ ದೂರನ್ನು ಆಲಿಸಿದ ಅವರು, ಆ ರೀತಿ ಹಾಕಿದ್ದರೆ ತೆಗೆಯುವಂತೆ ನೀರುಗಂಟಿಗೆ ಸೂಚಿಸಿದರು.
ಹಂಚಿನಮನೆ ಹತ್ತಿರದಲ್ಲಿ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯದೆ ನಿಂತಿರುವುದನ್ನು ಕಂಡ ಅವರು, ಹೊಸದಾಗಿ ಚರಂಡಿ ನಿರ್ಮಾಣ ಆಗುವವರೆಗೆ ಸ್ವಚ್ಛಗೊಳಿಸುವಂತೆ ಆರೋಗ್ಯಾಧಿಕಾರಿ ಆದೀಶ್ಗೆ ಸೂಚಿಸಿದರು.
ಗುಂಡಿನಮ್ಮ ದೇವಾಲಯಕ್ಕೆ ಸಾಗುವ ರಸ್ತೆಗೆ ಡಾಂಬರ್ ಹಾಕುವಂತೆ ಹಾಗೂ ಚರಂಡಿ ನಿರ್ಮಿಸಿಕೊಡುವಂತೆ ಜನರು ಮನವಿ ಮಾಡಿದರು.
ಕೋದಂಡರಾಮಚಂದ್ರಸ್ವಾಮಿ ಬೀದಿಯಲ್ಲಿ ಸಾಗಿದ ಅವರು, ಒಳಚರಂಡಿ ಕಾಮಗಾರಿ ವೀಕ್ಷಿಸಿದರು. ಪರಿಶಿಷ್ಟರ ಕಾಲೋನಿಯ ಮುತ್ತಿನಮ್ಮ ದೇವಾಲಯ ಎದುರಿನಲ್ಲಿರುವ ನಗರಸಭೆ ನಿವೇಶನದಲ್ಲಿ ಪಾರ್ಕ್ ನಿರ್ಮಿಸಿ ಅಭಿವೃದ್ಧಿಪಡಿಸುವಂತೆ ಎಂಜಿನಿಯರ್ಗೆ ಸೂಚಿಸಿದರು.
ಕಾಲೊನಿಯ ಚಿಕ್ಕಮ್ಮ ದೇವಾಲಯದ ಪಕ್ಕದಲ್ಲಿ ಜೀರ್ಣಾವಸ್ಥೆಯಲ್ಲಿರುವ ಸಮುದಾಯ ಭವನವನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಕುರಿತು ನಗರಸಭೆ ಸದಸ್ಯ ಎಚ್.ಎಸ್.ಪುಟ್ಟಸ್ವಾಮಿ ಆಯುಕ್ತರಿಗೆ ಮಾಹಿತಿ ನೀಡಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಕುರಿತು ಯಾವುದೇ ದೂರುಗಳು ಸಾರ್ವಜನಿಕರಿಂದ ಬಾರದಂತೆ ನೋಡಿಕೊಳ್ಳಬೇಕು. ಈ ಕಾರ್ಯಗಳಿಗೆ ಪ್ರಥಮಾದ್ಯತೆ ನೀಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಅಂಬೇಡ್ಕರ್ ಯುವ ಅಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಸಿ.ಗಂಗಾಧರ್, ಕಾರ್ಯದರ್ಶಿ ಪುಷ್ಪರಾಜ್, ಸುರೇಶ್, ಸಂತೋಷ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.