ಸ್ವೀಡನ್-ಭಾರತ ನೊಬೆಲ್ ಸ್ಮಾರಕ ರಸಪ್ರಶ್ನೆ ಸ್ಪರ್ಧೆಯ ಪ್ರಾದೇಶಿಕ ಸುತ್ತಿನಲ್ಲಿ ಪಿಇಎಸ್ ತಾಂತ್ರಿಕ ಕಾಲೇಜು ಎರಡನೇ ಹಾಗೂ ಕೆಎಲ್ಇ ತಂಡ ಮೂರನೇ ಸ್ಥಾನ ಗಳಿಸಿದವು. ಮೊದಲ ಬಹುಮಾನ ಕೇರಳದ ತ್ರಿಶ್ಶೂರ್ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪಾಲಾಯಿತು.
ನೊಬೆಲ್ ಪ್ರಶಸ್ತಿಯ ಸಂಸ್ಥಾಪಕ ದಿ. ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಸ್ವೀಡನ್-ಭಾರತಗಳು ಜತೆಗೂಡಿ ಈ ಸ್ಪರ್ಧೆ ನಡೆಸುತ್ತಿವೆ. ಇದರಲ್ಲಿ ನೊಬೆಲ್, ಅವರ ಕಾರ್ಯ ಕೈಗೊಂಡ ಕಾರ್ಯ, ನೊಬೆಲ್ ಪಾರಿತೋಷಕ, ಸುಧಾರಣೆಗಳು ಹಾಗೂ ಅನ್ವೇಷಣೆಗಳು, ಸ್ವೀಡನ್ ಹಾಗೂ ಅಲ್ಲಿನ ಉದ್ಯಮ ಸಂಸ್ಥೆಗಳು ಹಾಗೂ ಸಾಮಾನ್ಯ ಜ್ಞಾನ ಕುರಿತ ಪ್ರಶ್ನೆಗಳನ್ನು ಕೇಳಲಾಯಿತು.
ಕರ್ನಾಟಕ ಹಾಗೂ ಕೇರಳದ ವಿವಿಧ ಕಾಲೇಜುಗಳ 170ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಆರಂಭಿಕ ಸುತ್ತಿನಲ್ಲಿ 25 ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು. ಈ ಸುತ್ತಿನಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಆರು ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾದವು.
ಕೌನ್ಬನೇಗಾ ಕರೋಡ್ಪತಿ, ಮಾಸ್ಟರ್ಮೈಂಡ್ ಇಂಡಿಯಾದಂಥ ಕಾರ್ಯಕ್ರಮಗಳ ಮುಖ್ಯ ಸಂಶೋಧಕರಾಗಿದ್ದ ಆದಿತ್ಯನಾಥ್ ಮುಬಾಯಿ ಸ್ಪರ್ಧೆ ನಡೆಸಿಕೊಟ್ಟರು.
ಪ್ರಶಸ್ತಿ ಗೆದ್ದ ಪಿಇಎಸ್ ತಂಡದ ಎಂ.ಎಸ್.ಆನಂದ್, ವರುಣ್ ಬಿ.ರಾವ್ ಹಾಗೂ ಜಿ.ಶ್ರೀರಾಮ್ ಅವರನ್ನು ಪಿಇಎಸ್ ಸಂಸ್ಥೆಗಳ ಸಿಇಒ ಪ್ರೊ. ಡಿ.ಜವಾಹರ್ ಅಭಿನಂದಿಸಿದ್ದಾರೆ.