ನವದೆಹಲಿ (ಪಿಟಿಐ): ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ ಆಯ್ಕೆ ಟ್ರಯಲ್ಸ್ ವಿವಾದದ ಸಂಬಂಧ ಭಾರತ ಬಾಕ್ಸಿಂಗ್ ಫೆಡರೇಷನ್ (ಐಬಿಎಫ್) ನೀಡಿದ್ದ ಷೋಕಾಸ್ ನೋಟಿಸ್ಗೆ ಮೂವರು ಬಾಕ್ಸರ್ಗಳು ಪ್ರತಿಕ್ರಿಯೆ ನೀಡಿದ್ದಾರೆ.
ಆಯ್ಕೆ ಟ್ರಯಲ್ಸ್ನಲ್ಲಿ ಮೋಸ ನಡೆದಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ದಿನೇಶ್ ಕುಮಾರ್ (91 ಕೆ.ಜಿ.), ದಿಲ್ಬಾಗ್ ಸಿಂಗ್ (69 ಕೆ,ಜಿ.) ಹಾಗೂ ಪ್ರವೀಣ್ ಕುಮಾರ್ (91 ಕೆ.ಜಿ) ಆರೋಪಿಸಿದ್ದರು.
ವಿವಾದದ ಬಗ್ಗೆ ಫೆಡರೇಷನ್ ವಿಚಾರಣೆ ನಡೆಸುತ್ತಿದ್ದು, ಸೆಪ್ಟೆಂಬರ್ 20ರಂದು ಅಂತಿಮ ತೀರ್ಪು ಹೊರಬೀಳುವ ನಿರೀಕ್ಷೆ ಇದೆ. ‘ಬಾಕ್ಸರ್ಗಳು ನೋಟಿಸ್ಗೆ ಸ್ಪಂದಿಸಿದ್ದಾರೆ. ಅವರು ನೀಡಿರುವ ಪ್ರತಿಕ್ರಿಯೆ ನಮಗೆ ಲಭ್ಯವಾಗಿದೆ. ಫೆಡರೇಷನ್ ರಚಿಸಿರುವ ಶಿಸ್ತು ಸಮಿತಿ ಸಭೆ ಸೇರಲಿದ್ದು ಈ ಬಗ್ಗೆ ಪರಿಶೀಲನೆ ನಡೆಸಲಿದೆ’ ಎಂದು ಫೆಡರೇಷನ್ನ ಅಧ್ಯಕ್ಷ ಅಭಿಷೇಕ್ ತಿಳಿಸಿದ್ದಾರೆ.
ಶಿಸ್ತು ಸಮಿತಿಯಲ್ಲಿ ಫೆಡರೇಷನ್ನ ಉಪಾಧ್ಯಕ್ಷರುಗಳಾದ ಐ.ಡಿ.ನಾನಾವತಿ, ಮುಖರ್ಜಿ ನಿರ್ವಾಣ್ ಹಾಗೂ ಐಬಿಎಫ್ನ ರಿಂಗ್ ಅಧಿಕಾರಿಗಳ ಆಯೋಗದ ಮುಖ್ಯಸ್ಥ ನರೋತ್ತಮ ಸಿಂಗ್ ರಾವತ್ ಇದ್ದಾರೆ,
ಕಜಕಸ್ತಾನದ ಅಲ್ಮಟಿಯಲ್ಲಿ ಅಕ್ಟೋಬರ್ 11ರಿಂದ 27ರವರೆಗೆ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ಗೆ ಭಾರತ ತಂಡ ಆಯ್ಕೆ ಮಾಡಲು ಪಟಿಯಾಲದಲ್ಲಿ ಆಯೋಜಿಸಲಾಗಿದ್ದ ಟ್ರಯಲ್ಸ್ನಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಈ ಮೂವರು ಬಾಕ್ಸರ್ಗಳು ಆರೋಪಿಸಿದ್ದರು.