ಧಾರವಾಡ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳ ಒತ್ತಡ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕರ್ತವ್ಯ ನಿರ್ವಹಣೆಯಲ್ಲಿ ಅನುಭವಿಸಿದ ಒತ್ತಡ ತಾಳಲಾರದೇ ಗುಲಬರ್ಗ ಜಿಲ್ಲೆಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದ ಪಿಡಿಒ ಮಂದಾಕಿನಿ ಆತ್ಮಹತ್ಯೆ ಮಾಡಿ ಕೊಂಡರು. ಇದಕ್ಕೆ ಜನಪ್ರತಿನಿಧಿಗಳ ಒತ್ತಡವೇ ಕಾರಣ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ಈಚೆಗೆ ಬೀದರ್ ಜಿಲ್ಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಳಾ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಪಿಡಿಒಗಳ ಮೇಲೆ ಇಂಥ ಹಲ್ಲೆಗಳು ಪದೇ ಪದೇ ನಡೆಯುತ್ತಿದ್ದು ಮಾನಸಿಕ ಕಿರುಕುಳವನ್ನು ಕೂಡ ನೀಡಲಾಗುತ್ತಿದೆ. ಕೂಡಲೇ ಇಂಥ ಕೃತ್ಯಗಳಿಗೆ ಕಡಿವಾಣ ಹಾಕದಿದ್ದರೆ ಸಾಮೂಹಿಕ ರಾಜೀನಾಮೆ ನೀಡಬೇಕಾತ್ತದೆ ಎಂದು ಪ್ರತಿಭಟನಾ ಕಾರರು ಎಚ್ಚರಿಕೆ ನೀಡಿದ್ದಾರೆ.
ಅ. 19 ರಂದು ಬೆಂಗಳೂರು ಚಲೋ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಮನವಿ ಯಲ್ಲಿ ತಿಳಿಸಲಾಗಿದೆ.
ನಾಗರಾಜ ಬಿದರಳ್ಳಿ, ಚಂದ್ರು ಪೂಜಾರ, ಕೆ.ವಿ.ಪಾಟೀಲ, ನಾಗರಾಜ ಗಿನಿವಾಲದ, ಸುಧಾ ಗಾಣದಾಳ, ಶ್ವೇತಾ ಬಿದರೆ, ಜ್ಯೋತಿ ಚಲವಾದಿ, ಸಿದ್ಧು ಐರಣಿ, ಎಸ್.ಎಂ.ಕುಂದೂರ, ಕುಂಬಾರ, ಹುರಕಡ್ಲಿ ಮತ್ತಿತರರು ಭಾಗವಹಿಸಿದ್ದರು.