ಗಜೇಂದ್ರಗಡ: ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ನಾಗರ ಪಂಚಮಿ ಪ್ರಯುಕ್ತ ಭಾನುವಾರ ಇಲ್ಲಿನ ನವನಗರದ ನಾಗರಿಕರು ಆಯೋಜಿಸಿದ್ದ `ನಾಗರಕಟ್ಟೆ ವಿಶೇಷ ಪೂಜಾ~ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಕೆಲ ನಗರ ಹಾಗೂ ಪಟ್ಟಣಗಳು ಭಾಗಶ: ಅಭಿವೃದ್ಧಿಯಿಂದ ವಂಚಿತಗೊಂಡಿವೆ.
ಸುವ್ಯವಸ್ಥಿತ ಸಿ.ಸಿ ರಸ್ತೆ, ಮಹಿಳಾ ಸಮುದಾಯ ಶೌಚಾಲಯ, ಏಕಪಥ ರಸ್ತೆಗಳ ನಿರ್ಮಾಣ, ಸುರಕ್ಷಿತ ಚಂರಡಿ, ಪ್ರಮುಖ ರಸ್ತೆಗಳ ನಿರ್ಮಾಣ, ಉದ್ಯಾನವನ, ನಗರ ಸಾರ್ವಜನಿಕ ಗ್ರಂಥಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಬೆಳೆದಿರುವ ಪಟ್ಟಣಗಳಿಗೆ ನಿತ್ಯ ಅಸಂಖ್ಯಾತ ನಾಗರಿಕರು, ವಾಹಗನಗಳು ವ್ಯಾಪಾರ ವಹಿವಾಟುಗಳಿಗೆ ಆಗಮಿಸುತ್ತಾರೆ. ಇದರಿಂದ ಪಟ್ಟಣಗಳು ವ್ಯಾಪಕ ಜನದಟ್ಟಣೆ ಮತ್ತು ವಾಹನ ದಟ್ಟಣೆಯಿಂದ ಕೂಡಿ, ಸಂಚಾರಕ್ಕೆ ಸಂಚಕಾರವನ್ನುಂಟು ಮಾಡುತ್ತಿವೆ ಎಂದರು.
ಇದನ್ನು ತಡೆಯಲು ರಸ್ತೆ ಅಗಲೀಕರಣ ಹಾಗೂ ಪಾದಚಾರಿಗಳ ಸಂಚಾರ ಸುರಕ್ಷತೆಯ ದೃಷ್ಟಿಯಿಂದ ವ್ಯವಸ್ಥಿತ ಪುಟ್ಪಾತ್ ನಿರ್ಮಾಣಕ್ಕೆ ಗಮನ ಹರಿಸಲಾಗುವುದು. ಈ ದಿಸೆಯಲ್ಲಿ ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಪೂರ್ಣ ಪ್ರಮಾಣದ ಸಹಕಾರ ನೀಡಬೇಕು ಎಂದರು.
ರೋಣ ಮತಕ್ಷೇತ್ರದಲ್ಲಿನ ಬಹುತೇಕ ಪಟ್ಟಣಗಳನ್ನು ಭಾಗಶ: ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ ಶೇ.12ಅಭಿವೃದ್ಧಿ ಕಾರ್ಯಗಳು ಬಾಕಿ ಇದ್ದು, ಅವುಗಳನ್ನು ಸಹ ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು.
ಜಿಲ್ಲೆಯ ಪಟ್ಟಣ ಪ್ರದೇಶಗಳ ಬಹುತೇಕ ಹಿಂದುಳಿದ ಹಾಗೂ ಬಡ ವರ್ಗದ ಜನತೆಗೆ ಶಾಶ್ವತ ಸೂರು ಇಲ್ಲ.
ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಾಜಪೇಯಿ ವಸತಿ ಯೋಜನೆ, ಅಂಬೇಡ್ಕರ್, ಇಂದಿರಾ ಆವಾಸ ವಸತಿ ಯೋಜನೆಗಳಡಿ ನಿವೇಶನ ನೀಡಲಾಗುತ್ತಿದೆ. ಆದರೆ, ಕೆಲ ನಗರಗಳಲ್ಲಿ ಭೂಮಿ ಕೊರತೆ ಇದೆ. ಉದಾರಿಗಳು ಸರ್ಕಾರ ನಿಗದಿ ಪಡಿಸುವ ದರಕ್ಕೆ ಭೂಮಿಯನ್ನು ಮಾರಾಟ ಮಾಡುತ್ತಿಲ್ಲ. ಹೀಗಾಗಿಯೇ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಜಮೀನು ಕೊರತೆ ಇದ್ದು, ಇದರಿಂದ ಕಾಮಗಾರಿಗಳು ಕುಂಠಿತಗೊಂಡಿವೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಬಿ.ಎಂ.ಸಜ್ಜನರ, ಎ.ಪಿ.ಎಂ.ಸಿ ವರ್ತಕ ಸಂಘದ ಅಧ್ಯಕ್ಷ ಅಮರೇಶ ಬಳಿಗೇರ, ಹೊಳೆ ಆಲೂರ ಎಪಿಎಂಸಿ ಅಧ್ಯಕ್ಷ ಅಬರೀಶ ಅರಳಿ, ಬಾಳು ಗೌಡರ ಮುಂತಾದವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.