ಯಳಂದೂರು: `ಯಳಂದೂರು ಪಟ್ಟಣದ ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇಲ್ಲಿ ವಸತಿ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಉಳ್ಳವರು ಭೂಮಿಯನ್ನು ನೀಡಿದರೆ, ಮಾದರಿ ಉಪ ಪಟ್ಟಣ ನಿರ್ಮಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಲಾಗುವುದು~ ಎಂದು ಶಾಸಕ ಜಿ.ಎನ್.ನಂಜುಂಡಸ್ವಾಮಿ ತಿಳಿಸಿದರು.
ಭಾನುವಾರ ಪಟ್ಟಣ ಪಂಚಾಯಿತಿ ವತಿಯಿಂದ ಆಶ್ರಯ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರಿಗಳ ವಸತಿ ಗೃಹಗಳ ಭೂಮಿ ಪೂಜೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಣೆ ಮತ್ತು ನಮ್ಮ ಮನೆ ಯೋಜನೆಯ ಫಲಾನುಭವಿಗಳಿಗೆ ವಂತಿಗೆ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಪಂಚಾಯಿತಿಯ ಅಧಿಕಾರಿಗಳು ಉಳಿದುಕೊಳ್ಳಲು ಆಶ್ರಯ ಬಡಾವಣೆಯಲ್ಲಿ ವಸತಿ ಗೃಹಗಳನ್ನು ರೂ. 47 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಮುಂದಿನ ತಿಂಗಳಿನಲ್ಲಿ ರೂ.1.10 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಕಚೇರಿಯನ್ನೂ ಸಹ ಇಲ್ಲೇ ನಿರ್ಮಿಸಿ ಸಾರ್ವಜನಿಕ ಕೆಲಸಗಳನ್ನು ಸುಗಮಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಆಶ್ರಯ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು. ಇದರ ಜತೆಗೆ ರಸ್ತೆ ಚರಂಡಿ ಅಭಿವೃದ್ಧಿಗೂ ಕ್ರಮ ವಹಿಸುವುದಾಗಿ ತಿಳಿಸಿದರು.
ಶೇ.22.75 ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ಹಾಗೂ ನಮ್ಮ ಮನೆ ಯೋಜನೆಯ ಫಲಾನುಭವಿಗಳಿಗೆ ವಂತಿಗೆ ಚೆಕ್ಗಳನ್ನು ವಿತರಿಸಲಾಯಿತು.
ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ಚಿನ್ನಮ್ಮ ಮರಯ್ಯ, ಸದಸ್ಯರಾದ ನಾಗರತ್ನಾ ಮಹೇಶ್, ಜಯರಾಂ, ಸೋಮನಾಯಕ, ಶ್ರೀನಿವಾಸನಾಯಕ, ನಾಗೇಶ್, ಸತೀಶ್ ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಪಿ. ಶಿವಣ್ಣ, ಮುಖ್ಯಾಧಿಕಾರಿ ವಿಜಯ, ಜೆಇ ಬೆಟ್ಟಸ್ವಾಮಿ, ಆರೋಗ್ಯಾಧಿಕಾರಿ ನಂಜುಂಡಯ್ಯ, ನಿರ್ಮಿತಿ ಕೇಂದ್ರದ ಜೆಇ ರವಿಕುಮಾರ್, ಗಿರೀಶ್, ಅಶೋಕ್, ಚೆಲುವರಾಜು, ಮುಖಂಡರಾದ ಮದ್ದೂರು ವಿರೂಪಾಕ್ಷ, ಮಹೇಶ್, ನಾಗರಾಜು, ನಂಜುಂಡ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.