ತುಮಕೂರು: ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಒಂದು ವಾರದೊಳಗೆ ಪರಿಶೀಲಿಸಿ ಪಡಿತರ ಚೀಟಿ ನೀಡದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅನ್ನಭಾಗ್ಯ ಯೋಜನೆ ಪರಿಣಾಮಕಾರಿ ಅನುಷ್ಠಾನ ಸಭೆಯಲ್ಲಿ ಮಾತನಾಡಿ, ನವೆಂಬರ್ನಲ್ಲಿ ಪಡಿತರ ಚೀಟಿ ಪರಿಶೀಲನೆ ಕಾರ್ಯ ಮುಕ್ತಾಯಗೊಳ್ಳಬೇಕಿತ್ತು. ಪ್ರತ್ಯೇಕ ವಾಸವಿರುವ ಕುಟುಂಬವನ್ನು ಗಣನೆಗೆ ತೆಗೆದುಕೊಂಡು ಒಂದು ಪಡಿತರ ಚೀಟಿ ನೀಡಬಹುದು. ಬಹು ಪಡಿತರ ಚೀಟಿ ಪಡೆದಿದ್ದಲ್ಲಿ ರದ್ದುಪಡಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 1.59 ಲಕ್ಷ ಹೊಸ ಅರ್ಜಿ ಸ್ವೀಕರಿಸಲಾಗಿದ್ದು, 44,052 ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ. ಇದರಲ್ಲಿ 28,749 ಕುಟುಂಬ-ಗಳಿಗೆ ಬಿಪಿಎಲ್, 5,479ಕ್ಕೆ ಎಪಿಎಲ್ ಪಡಿತರ ಚೀಟಿ ನೀಡಲು ಶಿಫಾರಸು ಮಾಡಲಾಗಿದೆ. 6,576 ಅರ್ಜಿಗಳನ್ನು ಅನರ್ಹ ಎಂದು ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ 11 ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಬಿಪಿಎಲ್ ಪಡಿತರ ಚೀಟಿ ನೀಡಲು ಶಿಫಾರಸು ಮಾಡಿರುವ ಅರ್ಜಿಗಳಲ್ಲಿ ಕನಿಷ್ಠ 5ರಷ್ಟನ್ನು ಮರು ಪರಿಶೀಲಿಸಲು ಸೂಚಿಸಲಾಯಿತು. ಬಿಪಿಎಲ್ ಪಡಿತರ ಚೀಟಿ ಪರಿಶೀಲನೆ ಸಮರ್ಪಕವಾಗಿಲ್ಲ ಎಂದು ಶಾಲಿನಿ ಅಸಮಾಧಾನ ವ್ಯಕ್ತಪಡಿಸಿದರು.
ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಪಡಿತರ ನೀಡದಿದ್ದರೆ ಮಾಹಿತಿ ಪರಿಶೀಲಿಸಿ, ಅಂತಹ ನ್ಯಾಯ ಬೆಲೆ ಅಂಗಡಿ ಮಾಲೀಕರ ವಿರುದ್ಧ ಉಪ ವಿಭಾಗಾಧಿಕಾರಿಗೆ ದೂರು ನೀಡಲು ಮತ್ತು ಜಿಲ್ಲಾಮಟ್ಟದಲ್ಲಿ ಸಹಾಯವಾಣಿ ಮೂಲಕ ಉಪ ನಿರ್ದೇಶಕರ ಕಚೇರಿಗೆ ಬರುವ ದೂರುಗಳನ್ನು ಆಯಾ ಆಹಾರ ಶಿರಸ್ತೇದಾರರಿಗೆ ತಲುಪಿಸಿ, ಬಗೆಹರಿಸಲು ಆದೇಶಿಸಿದರು.
ನ್ಯಾಯ ಬೆಲೆ ಅಂಗಡಿಗಳು ವಿತರಿಸುತ್ತಿರುವ ಪ್ರಮಾಣ, ಪಡೆಯುತ್ತಿರುವ ದರದ ಬಗ್ಗೆ ಆಗಾಗ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.ತು.ಜಿಲ್ಲೆಯ ಸಕಾಲ ಯೋಜನೆ ದತ್ತಾಂಶ ನಮೂದಕರ ಸೇವೆಯನ್ನು ಆಹಾರ ಇಲಾಖೆ ಬಳಸಿಕೊಂಡು, ದತ್ತಾಂಶ ನಮೂದು ಹಾಗೂ ಪಡಿತರ ಚೀಟಿ ಮುದ್ರಣ ಕಾರ್ಯವನ್ನು ಸಕಾಲದಲ್ಲಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಯಿತು.