ಡಿಸೆಂಬರ್11ಕ್ಕೆ 91ನೇ ವರ್ಷಕ್ಕೆ ಕಾಲಿರಿಸಿದ ದಿಲೀಪ್ ಕುಮಾರ್ ಬಗ್ಗೆ ಸಾಯಿರಾಬಾನು ಹೇಳುವುದಿಷ್ಟು: `ನನ್ನ ಪಾಲಿಗೆ ಪತಿಯೇ ಪರದೈವ'. 46 ವರ್ಷಗಳ ದಾಂಪತ್ಯ ಬದುಕಿನ ಕುರಿತು ಮಾತನಾಡುತ್ತಾ ಸಾಯಿರಾಬಾನು ತಮ್ಮ ದಿಲೀಪ್ ಸಾಹೇಬರ ಬಗ್ಗೆ ಹೇಳಿಕೊಂಡಿದ್ದಾರೆ. ದೇವರು ಸೃಷ್ಟಿಸಿದ ಬಂಗಾರದ ಮನುಷ್ಯ ಆತ ಎಂದು ಶ್ಲಾಘಿಸಿದ್ದಾರೆ.
ನಲ್ವತ್ತಾರು ವರ್ಷಗಳಲ್ಲಿ ಸಾರ್ವಜನಿಕವಾಗಿ ಅವರ ಕೈ ಹಿಡಿಯಲು ಬಿಡದಷ್ಟು ನಾಜೂಕಿನ ಮನುಷ್ಯ ಎಂದು ದೂರುತ್ತಲೇ ಮೆಚ್ಚುಗೆಯನ್ನು ಸೂಸುತ್ತಾರೆ ಸಾಯಿರಾ.
`ದಿಲೀಪ್ ಸಾಹೇಬ್ ನನ್ನ ಪಾಲಿಗೆ ಸರ್ತಾಜ್. ಅವರನ್ನು, ಅವರ ಕುಟುಂಬವನ್ನು ಸಂತೋಷದಿಂದಿರಿಸುವುದೇ ನನ್ನ ಪರಮ ಕರ್ತವ್ಯ ಎಂದುಕೊಂಡೇ ಬದುಕಿದ್ದೇನೆ. ನನ್ನ, ಅವರ ಸಾಂಗತ್ಯಕ್ಕೆ 46 ವರ್ಷಗಳಿರಬಹುದು. ಆದರೆ 12ರ ವಯಸ್ಸಿನಿಂದಲೇ ನಾನು ಅವರನ್ನು ಪ್ರೀತಿಸುತ್ತಿದ್ದೆ' ಎಂದೆಲ್ಲ ಸಾಯಿರಾಬಾನು ಹೇಳಿದ್ದಾರೆ.
ದಿಲೀಪ್ ಕುಮಾರ್ ಹಾಗೂ ಸಾಯಿರಾಬಾನು ನಡುವೆ ವಯಸ್ಸಿನ ಅಂತರ 22 ವರ್ಷಗಳದ್ದು. ಆದರೆ ಈ ವಯಸ್ಸಿನ ಅಂತರದಿಂದಾಗಿಯೇ ಅವರ ದಾಂಪತ್ಯ ಗಟ್ಟಿಯಾಗಿದೆ ಎಂಬುದು ಅವರ ನಂಬಿಕೆ.
`ಎಂಥದ್ದೇ ಸಂದರ್ಭ ಬಂದರೂ ನಾವಿಬ್ಬರೂ ಒಟ್ಟಿಗೆ ಎದುರಿಸಿದ್ದು, ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತ ಹೋಯಿತು' ಎನ್ನುತ್ತಾರೆ ಅವರು.
ಈ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸುವುದಾಗಿಯೂ ಹೇಳಿದ ಸಾಯಿರಾಬಾನು, ಈ ವರ್ಷ ಬಹಳಷ್ಟು ಸ್ನೇಹಿತರು ನಮ್ಮನ್ನು ಅಗಲಿದ್ದಾರೆ. ಸಮಾರಂಭದ ಸಂಭ್ರಮವನ್ನು ಆಚರಿಸುವ ಸ್ಥಿತಿಯಲ್ಲಿ ದಿಲೀಪ್ ಸಾಹೇಬರಿಲ್ಲ. ಅವರಿಷ್ಟದಂತೆ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಮಾತ್ರ ಸೇರಿ ಆಚರಿಸಲಾಗುತ್ತದೆ. ಆದರೆ ಅವರ ಅಭಿಮಾನಿಗಳು, ಪಾಕಿಸ್ತಾನದಲ್ಲಿಯೂ, ಲಂಡನ್ನಲ್ಲಿಯೂ ಆಚರಿಸುತ್ತಿರುವುದಾಗಿ ತಿಳಿಸಿದ್ದಾರೆ ಎಂದೂ ಸಾಯಿರಾ ಹೇಳಿದ್ದಾರೆ.
ಯಶ್ ಚೋಪ್ರಾ, ದಾರಾಸಿಂಗ್, ರಾಜೇಶ್ ಖನ್ನಾ, ಬಾಳ ಠಾಕ್ರೆ ಮುಂತಾದವರ ನಿಧನದಿಂದಾಗಿ ದಿಲೀಪ್ ಕುಮಾರ್ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ನಿರಾಕರಿಸಿದ್ದಾಗಿ ಸಾಯಿರಾಬಾನು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.