ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯುತ್ತಿರುವಾಗಲೇ ಕೊರಟಗೆರೆಯ ಕೆಲವರು ಪರಮೇಶ್ವರ್ ಪರ ಕರಪತ್ರ ಹಂಚಿದರು. ತಾಲ್ಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಎನ್.ಚಿಕ್ಕರಂಗಯ್ಯ ಸೇರಿದಂತೆ ಹಲವರ ಹೆಸರು ಈ ಕರಪತ್ರದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಪರಮೇಶ್ವರ್ ಪಾತ್ರ ಹಿರಿದಾಗಿದ್ದು, ಅವರಿಗೆ ಸಂಪುಟದಲ್ಲಿ ಸ್ಥಾನ ನೀಡದೇ ಕಡೆಗಣಿಸಲಾಗಿದೆ ಎಂದು ಕರಪತ್ರದಲ್ಲಿ ದೂರಲಾಗಿದೆ.
‘ಪರಮೇಶ್ವರ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡದಿದ್ದರೆ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸುವ ಆಂದೋಲನವನ್ನು ಎಡಗೈ ಮತ್ತು ಬಲಗೈ ಪಂಗಡದ ದಲಿತರು ಒಟ್ಟಾಗಿ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಕುರುಬರ ಮತಗಳು ನಿರ್ಣಾಯಕವಲ್ಲ. ದಲಿತರ ಮತಗಳೇ ನಿರ್ಣಾಯಕ ಎಂಬುದನ್ನು ಸಿದ್ದರಾಮಯ್ಯ ಮನವರಿಕೆ ಮಾಡಿಕೊಳ್ಳಬೇಕು’ ಎಂಬ ಆಗ್ರಹ ಅದರಲ್ಲಿದೆ.