ಬೆಂಗಳೂರು: `ಕೃಷಿ ಸಹಕಾರ ಸಂಘಗಳನ್ನು ರಚಿಸುವ ವಿಚಾರದಲ್ಲಿ ರೈತರು ಒಗ್ಗಟ್ಟು ಪ್ರದರ್ಶಿಸುವ ಮಾದರಿಯಲ್ಲೇ ಪರಿಸರ ಸಂರಕ್ಷಣೆಯ ವಿಚಾರದ್ಲ್ಲಲಿಯೂ ಬದ್ಧತೆಯನ್ನು ತೋರ್ಪಡಿಸಬೇಕು~ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್. ದ್ವಾರಕೀನಾಥ್ ಸಲಹೆ ನೀಡಿದರು.
ಕೃಷಿ ಇಲಾಖೆಯು ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಕೃಷಿ ಚಟುವಟಿಕೆಯ ಬೆಳವಣಿಗೆಗೆ ನೆರವು ನೀಡುತ್ತಿರುವ ಸಹಕಾರಿ ಸಂಸ್ಥೆಗಳು ಆಹಾರ ಭದ್ರತೆಗೂ ಮಹತ್ವ ನೀಡಬೇಕು. ಆರ್ಥಿಕ ವ್ಯವಸ್ಥೆಯಲ್ಲಿ ರೈತರನ್ನು ಪ್ರೋತ್ಸಾಹಿಸುವಂತಹ ಸಾಲಸೌಲಭ್ಯಗಳು ದೊರೆಯಬೇಕಿದೆ~ ಎಂದು ಹೇಳಿದರು.
`ಮಳೆ ಮತ್ತು ಮಣ್ಣಿನ ಗುಣಗಳನ್ನು ಆಧರಿಸಿ ಬೆಳೆ ತೆಗೆಯುವ ಕೌಶಲವನ್ನು ರೈತರು ರೂಢಿಸಿಕೊಂಡರೆ ಮಾತ್ರ ಕೃಷಿ ಕ್ಷೇತ್ರದಲ್ಲಿನ ಬಹುಪಾಲು ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕೃಷಿಗೆ ಸಂಬಂಧಪಟ್ಟ ಸಹಕಾರ ಸಂಸ್ಥೆಗಳು ಕೃಷಿ ಬೆಳವಣಿಗೆಯೊಂದಿಗೆ ಪರಿಸರವನ್ನು ಉಳಿಸುವತ್ತ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ~ ಎಂದು ತಿಳಿಸಿದರು.
`ಸರ್ಕಾರ ನಿಗದಿಪಡಿಸಿರುವ ಕೃಷಿಕನಿಗೆ ಕನಿಷ್ಠ ಕೂಲಿ ಎಲ್ಲೆಡೆ ಸಮರ್ಪಕವಾಗಿ ಜಾರಿಯಾಗಿರುವ ಬಗ್ಗೆ ಅನುಮಾನವಿದೆ. ಆದರೆ, ಕೃಷಿಕ ಸ್ನೇಹಿ ವಾತಾವರಣ, ವೈಜ್ಞಾನಿಕ ಕೃಷಿ ಮತ್ತು ಸಂಶೋಧನೆಗೆ ಮಹತ್ವ ನೀಡಿದರೆ ಭವಿಷ್ಯದಲ್ಲಿ ಆಹಾರ ಭದ್ರತೆಯ ಭರವಸೆ ನೀಡಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.
ಕೃಷಿ ಸಹಕಾರಿ ಪತ್ತಿನ ಸಂಘದ ಹೆಚ್ಚುವರಿ ಕಾರ್ಯದರ್ಶಿ ಬಿ.ಎ. ಮಹಾದೇವಪ್ಪ ಇತರರು ಉಪಸ್ಥಿತರಿದ್ದರು.