ಸಾಗರ: ಕಲಾವಿದನಿಗೆ ಅನೇಕ ರೀತಿಯ ಮಾನ, ಸನ್ಮಾನ, ಮನ್ನಣೆ, ಗೌರವ ಸಿಗುತ್ತದೆ. ಆದರೆ ಕಲಾವಿದನ ಪ್ರತಿಭೆಯನ್ನು ಪ್ರೇಕ್ಷಕ ವರ್ಗ ಗುರುತಿಸಿ, ಆಸ್ವಾದಿಸಿದಾಗ ಮಾತ್ರ ನಿಜವಾದ ಸಂತೃಪ್ತಿ ಸಿಕ್ಕುತ್ತದೆ ಎಂದು ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ ಡಾ. ಶ್ರೀಧರ ಭಂಡಾರಿ ಪುತ್ತೂರು ಹೇಳಿದರು.
ಇಲ್ಲಿನ ಯಕ್ಷಪ್ರಪಂಚದ ಯಕ್ಷ ಸೇವಾ ಪ್ರತಿಷ್ಠಾನ ಈಚೆಗೆ ಶೃಂಗೇರಿ ಮಠದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗುರುತಿಸಿದಾಗ ಮಾತ್ರ ಬಹು ದೊಡ್ಡ ಸಮಾಧಾನವಾಗುತ್ತದೆ. ರಂಗಸ್ಥಳದ ಅಭಿನಯವನ್ನು ಗುರುತಿಸಿ ನೇಪಥ್ಯದಲ್ಲಿ ಬಂದು ಅಭಿಮಾನ ಪೂರ್ವಕವಾಗಿ ಹೃದಯ ತುಂಬಿ ಮಾತನಾಡಿಸುವ ಅಭಿಮಾನಿಗಳೇ ಕಲಾವಿದರ ನಿಜವಾದ ಸಂಪತ್ತು ಎಂದು ಹೇಳಿದರು.
ಜೀವವಿಮಾ ನಿಗಮ ಸಾಗರ ಶಾಖೆಯ ಶಾಖಾಧಿಕಾರಿ ಎಚ್. ಎನ್.ಕೃಷ್ಣಮೂರ್ತಿ ಸಾಂಸ್ಕೃತಿಕ ಸಂಘಟನೆಗಳು ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ಕಲಾ ಮಾಧ್ಯಮಕ್ಕೆ ಅಪಚಾರವೆಸಗುವ ಅಪಾಯ ಗಳಿರುತ್ತವೆ. ಸಾಂಸ್ಕೃತಿಕ ಸಂಘಟನೆಗಳಿಗೆ ಬದ್ಧತೆ ಅಗತ್ಯ ಎಂದರು.
ಯಕ್ಷ ಪ್ರಂಪಂಚದ ಎಂ.ಎಲ್.ಭಟ್ ಮಾತನಾಡಿದರು. ಮುಂಬೈನ ಹೋಟೆಲ್ ಉದ್ಯಮಿ ಹಾಗೂ ದಾನಿ ಪಿ.ಆರ್.ಪ್ರಭಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಚಿಪ್ಪಳಿ ಗೋಪಾಲಕೃಷ್ಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಂಕರ ಮಠದ ಅಶ್ವಿನಿಕುಮಾರ್, ಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಮಂಜುನಾಥ ಗೊರಮನೆ ಸನ್ಮಾನ ಪತ್ರ ವಾಚಿಸಿದರು.