ಪಿರಿಯಾಪಟ್ಟಣ: ಕಾರೊಂದು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಮೂವರು ಕೂಲಿ ಕಾರ್ಮಿಕರು ಮೃತಪಟ್ಟ ಘಟನೆ ತಾಲ್ಲೂಕಿನ ಕುಂದನಹಳ್ಳಿ ಗ್ರಾಮದ ಬಳಿಯ ಬಿ.ಎಂ.ರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಆಲನಹಳ್ಳಿ ಗ್ರಾಮದ ಜಿ. ಮಂಜುನಾಥ (30), ತಮ್ಮೇಗೌಡ (40) ಮಂಜು (30) ಮೃತಪಟ್ಟವರು.
ಕುಂದನಹಳ್ಳಿ ಗ್ರಾಮದಲ್ಲಿ ಮುಸುಕಿನ ಜೋಳವನ್ನು ಲಾರಿಗೆ ತುಂಬಿ ಆಲನಹಳ್ಳಿ ಗ್ರಾಮಕ್ಕೆ ತಮ್ಮೇಗೌಡ, ಮಂಜುನಾಥ್, ಮಂಜು, ನಾಗೇಗೌಡ ಮತ್ತು ತಿಮ್ಮೇಗೌಡ ಎಂಬುವವರು ಬಿ.ಎಂ.ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಕುಶಾಲನಗರದ ಕಡೆಯಿಂದ ವೇಗವಾಗಿ ಬಂದ ಟಾಟಾ ಇಂಡಿಕಾ ಕಾರು ಚಾಲಕನ ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯಿಂದಾಗಿ ರಸ್ತೆ ಬದಿಯಲ್ಲಿ ತೆರಳುತ್ತಿದ್ದವರಿಗೆ ಡಿಕ್ಕಿ ಹೊಡೆಯಿತು.
ತಮ್ಮೇಗೌಡ, ಮಂಜು ಸ್ಥಳದಲ್ಲೆ ಮೃತಪಟ್ಟರು. ಮಂಜುನಾಥ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಗೇಗೌಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಮತ್ತೊಬ್ಬ ಗಾಯಾಳು ತಿಮ್ಮೇಗೌಡ ಅವರನ್ನು ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ. ಪೊಲೀಸರು ಕಾರಿನ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.