ಕೆಜಿಎಫ್: ಕ್ಯಾಸಂಬಳ್ಳಿ ಹೋಬಳಿ ಎಂಡವಾರ ಗ್ರಾಮದ ಪಾಲರ್ ನದಿ ತೀರದಲ್ಲಿ ಅಕ್ರಮವಾಗಿ ಮರಳು ಮಾಡಲಾಗುತ್ತಿದ್ದು, ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹಸಿರು ಸೇನೆ ಮತ್ತು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
ಬುಧವಾರ ಭೇಟಿ ನೀಡಿದ್ದ ಸಂಘಟನೆಗಳ ಮುಖಂಡರು ಎಂಡವಾರ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ, ರೈತ ಮುಖಂಡರು ಇಲ್ಲಿ ಅಕ್ರಮ ಮರಳು ಸಾಗಣೆ ಮಾಡಿರುವುದರಿಂದ ಸುಮಾರು ಇಪ್ಪತ್ತು ಅಡಿ ಆಳದ ಹಳ್ಳಗಳು ಬಿದ್ದಿವೆ ಎಂದು ಆರೋಪಿಸಿದರು.
ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ತಹಸೀಲ್ದಾರ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಮರಳು ಮಾಫಿಯಾ ನೀಡುವ ಹಣಕ್ಕಾಗಿ ಅಧಿಕಾರಿಗಳು ಮೌನವಹಿಸಿದ್ದಾರೆ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಹುಲ್ಕೂರು ಹರಿಕುಮಾರ್ ಅವರು ಆರೋಪಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಕೆರೆಗಳು ಮತ್ತು ಸರ್ಕಾರಿ ಜಮೀನುಗಳಿಂದ ಬೆಂಗಳೂರಿಗೆ ಪ್ರತಿದಿನ 40ರಿಂದ 50ರಷ್ಟು ಲಾರಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂದು ದೂರಿದರು.
ಕಂದಾಯ ಕಾಯಿದೆ ಪ್ರಕಾರ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಮುಖಂಡರಾದ ನಾರಾಯಣಗೌಡ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ, ಬೇತಮಂಗಲ ಮಂಜುನಾಥ, ಕೂಳೂರು ಗಣೇಶ್, ಪುರುಷೋತ್ತಮ್ ರೆಡ್ಡಿ, ನಾರಾಯಣಸ್ವಾಮಿ, ಕಾರಿ ವಿಶ್ವನಾಥ್ ಮೊದಲಾದವರು ಆಗ್ರಹಿಸಿದ್ದಾರೆ.