ಮಂಡ್ಯ: ನಾಗಮಂಗಲ ತಾಲ್ಲೂಕಿನ ಪಾಲುಕೆರೆಗೆ ಪಟ್ಟಣದ ಒಳಚರಂಡಿ ಮತ್ತು ಕಲುಷಿತ ನೀರನ್ನು ಬಿಡಲಾಗು ತ್ತಿದ್ದು, ಆಸುಪಾಸಿನ ನಾಗರಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಪಾಲಗ್ರ ಹಾರದ ಪಾಲುಕೆರೆ ಅಚ್ಚುಕಟ್ಟು ಸಮಿತಿಯು ಆಗ್ರಹಪಡಿಸಿದೆ.
ಪಾಲುಕೆರೆಯ ನೀರನ್ನು ಬಳಸಿ ಸುಮಾರು 500 ಎಕರೆ ಪ್ರದೇಶ ಅಚ್ಚುಕಟ್ಟು ಆಗಿ ಪರಿವರ್ತನೆಯಾಗಿದೆ. ಆದರೆ, ಕಲುಷಿತ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಈಚಿನ ವರ್ಷಗಳಲ್ಲಿ ಇದು ಜಾನುವಾರು ಬಳಕೆ, ಕೃಷಿ ಚಟುವಟಿಕೆ ಗಳಿಗೆ ಯೋಗ್ಯವಾಗಿಲ್ಲ ಎಂದು ಸಮಿತಿಯ ಅಧ್ಯಕ್ಷ ಪಿ.ಜೆ.ನಾರಾಯಣ ಸೋಮವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಆಡಳಿತದ ಗಮನ ವನ್ನು ಈ ಸಮಸ್ಯೆಯತ್ತ ಸೆಳೆ ಯಲು ಮಂಗಳವಾರ ನಾಗಮಂಗಲ ಪಟ್ಟಣ ದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗುವುದು ಎಂದರು.
ಕಲುಷಿತ ನೀರು ತಡೆಯುವ ಮೂಲಕ ಪಾಲುಕೆರೆ ಉಳಿಸಬೇಕು ಎಂದು ಆಗ್ರಹಪಡಿಸಿ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಿದರೂ ಪ್ರಯೋಜನ ವಾಗಿಲ್ಲ. ಈಗ ತೀವ್ರ ಹೋರಾಟ ನಡೆಸುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಜಿಲ್ಲಾ ಮತ್ತು ತಾಲ್ಲೂಕು ಆಡಳಿತವು ಇನ್ನಾದರೂ ಈ ಕುರಿತು ಗಮನಹರಿಸಿ ಕ್ರಮ ಕೈಗೊಳ್ಳದೇ ಇದ್ದಲ್ಲಿ ನಾಗರಿಕರ ನೆರವಿನಲ್ಲಿ ಕಾನೂನು ಹೋರಾಟ ಕೈಗೊಳ್ಳುವ ಬಗೆಗೂ ಸಮಿತಿಯು ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಅವೈಜ್ಞಾನಿಕವಾಗಿ ಒಳಚರಂಡಿ ನೀರು ಬಿಡುತ್ತಿರುವುದರಿಂದ ಈ ಭಾಗದಲ್ಲಿ ಅಂತರ್ಜಲ ಮಲಿನವಾಗಿದೆ.
ಇದು, ಈ ಭಾಗದ ನಿವಾಸಿಗಳ ಆರೋಗ್ಯದ ಮೇಲೂ ಭವಿಷ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಸಮಿತಿಯ ಪ್ರಸಾದ್ ಇದ್ದರು.