ಮಳವಳ್ಳಿ: ಪುರಸಭೆ ದಿನಗೂಲಿ ನೌಕರರೊಬ್ಬರನ್ನು ಪುರಸಭೆ ಸದಸ್ಯರೊಬ್ಬರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಗುರುವಾರ ಕೆಲವು ದಿನಗೂಲಿ ನೌಕರರು ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸೂಕ್ತ ಭದ್ರತೆಗೆ ಒತ್ತಾಯಿಸಿದರು.
ಪುರಸಭೆ ಸದಸ್ಯ ರಾಜಶೇಖರ್ ದಿನಗೂಲಿ ನೌಕರ ಸುರೇಶ್ ಎಂಬವರನ್ನು ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನೀರುಗಂಟಿ ಕೆಲಸ ನಿರ್ವಹಿಸುವ ದಿನಗೂಲಿ ನೌಕರರಿಗೆ ಪುರಸಭೆಯಿಂದ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಪುರಸಭೆ ಅಧ್ಯಕ್ಷ, ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸುರೇಶ್, ಮಹದೇವ, ಪುಟ್ಟಮಾದು, ಗಣೇಶ್, ಮುರುಗನ್, ರಾಜಣ್ಣ, ಮಾದೇಶ್ ಇತರರು ಹಾಜರಿದ್ದರು.