ಚೆನ್ನೈ (ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಕರ್ನಾಟಕದ ಜೊತೆಗೆ ಇನ್ನೊಂದು ನದಿ ವಿವಾದವನ್ನು ಕೈಗೆತ್ತಿಕೊಂಡಿದ್ದಾರೆ. ಕರ್ನಾಟಕವು ಪೆನ್ನೈಯಾರ್ ನದಿಗೆ ಕಟ್ಟಲು ಉದ್ದೇಶಿಸಿರುವ ತಡೆಗಟ್ಟಗಳನ್ನು ಕಟ್ಟುವ ಕೆಲಸ ಮುಂದುವರೆಸದಂತೆ ಹಿತವಾದ ಹೇಳಲು ಮಧ್ಯಪ್ರವೇಶ ಮಾಡಬೇಕು ಎಂದು ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಕಾವೇರಿ ನೀರು ಹಂಚಿಕೆ ವಿಷಯವನ್ನು ಎತ್ತಿಕೊಂಡು ಪ್ರಧಾನಿ ಮಧ್ಯಪ್ರವೇಶಕ್ಕಾಗಿ ಆಗ್ರಹಿಸಿದ ಒಂದು ದಿನದ ಬಳಿಕ ಈ ವಿಚಾರವನ್ನು ಎತ್ತಿಕೊಂಡಿರುವ ಜಯಲಲಿತಾ ಪ್ರಧಾನಿಯವರಿಗೆ ಬರೆದ ಮತ್ತೊಂದು ಪತ್ರದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.
ಪೆನ್ನೈಯಾರ್ ನದಿಯುದ್ದಕ್ಕೆ ತಡೆಗಟ್ಟಗಳನ್ನು ನಿರ್ಮಿಸುವ ಕರ್ನಾಟಕದ ಯೋಜನೆಯನ್ನು ಪತ್ರದಲ್ಲಿ ಪ್ರಸ್ತಾಪಿಸಿದ ಅವರು ~ಇದು ತಮಿಳುನಾಡಿನಲ್ಲಿ ಚಿಂತೆ ಹಾಗೂ ಪ್ರಕ್ಷುಬ್ಧತೆ ಉಂಟು ಮಾಡುವ ವಿಚಾರ ಎಂದು ಹೇಳಿದ್ದಾರೆ.
ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ವಿಲ್ಲುಪುರಂ ಮತ್ತು ಕಡಲೂರು ಮೂಲಕ ಹಾದು ಹೋಗುವ ಈ ನದಿ ಈ ಜಿಲ್ಲೆಗಳ ಜನರ ಪಾಲಿನ ಜೀವನದಿಯಾಗಿದ್ದು ಅಚ್ಚುಕಟ್ಟು ಪ್ರದೇಶದ ಸುಮಾರು 4 ಲಕ್ಷ ಜನರಿಗೆ ನೀರಾವರಿ ಒದಗಿಸುತ್ತಿದೆ ಎಂದು ಜಯಲಲಿತಾ ತಿಳಿಸಿದ್ದಾರೆ.
~ತಡೆಗಟ್ಟಗಳನ್ನು ನಿರ್ಮಿಸಿ ಪೆನ್ನೈಯಾರ್ ನದಿಯ ಹರಿವಿಗೆ ಅಡ್ಡಿ ಉಂಟು ಮಾಡುವುದು ಇಲ್ಲವೇ ನದಿಯ ನೀರನ್ನು ಬೇರೆ ಕಡೆಗೆ ಹರಿಯುವಂತಹ ನಿರ್ಮಾಣಗಳನ್ನು ರಚಿಸುವುದು ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜಾರಿಯಲ್ಲಿ ಇರುವ ಅಂತರ್-ರಾಜ್ಯ ಒಪ್ಪಂದಕ್ಕೆ ವಿರುದ್ಧವಾಗುತ್ತದೆ~ ಎಂದೂ ಜಯಲಲಿತಾ ಹೇಳಿದ್ದಾರೆ.
~ಇದು ತಮಿಳುನಾಡಿನ ರೈತರ ಪಾಲಿಗೆ ಮಾರಕ ಹೊಡೆತವಾಗುತ್ತದೆ. ಅಲ್ಲದೆ ಮೂಲಭೂತವಾದ ಕುಡಿಯುವ ನೀರು ಸರಬರಾಜಿಗೂ ಧಕ್ಕೆ ಉಂಟು ಮಾಡುತ್ತದೆ~ ಎಂದು ಜಯಲಲಿತಾ ತಿಳಿಸಿದ್ದಾರೆ.