ನವದೆಹಲಿ (ಪಿಟಿಐ): ಐದು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಎರಡು ದಿನಗಳ ಹಿಂದೆ ಅಮಾನತುಗೊಂಡಿರುವ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ದೆಹಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ಮಾಹಿತಿ ಹಕ್ಕು (ಆರ್ಟಿಐ) ಕಾರ್ಯಕರ್ತ ವಿವೇಕ್ ಗರ್ಗ್ ಎಂಬುವವರುವಿಶೇಷ ನ್ಯಾಯಾಧೀಶ ನರೋತ್ತಮ್ ಕೌಶಲ್ ಅವರ ಪೀಠದ ಎದುರು ಈ ದೂರನ್ನು ಸಲ್ಲಿಸಿದ್ದಾರೆ.
ಬಾಲಕಿಯ ಕುಟುಂಬವನ್ನು ಹೆದರಿಸಿದ್ದ ಹಾಗೂ ಅತ್ಯಾಚಾರ ವಿಷಯವನ್ನು ಮುಚ್ಚಿಹಾಕಲು ಲಂಚದ ಆಮೀಷ ಒಡ್ಡಿದ್ದ ಆರೋಪದ ಎದುರಿಸುತ್ತಿರುವ ಎಸಿಪಿ ಬಾನಿ ಸಿಂಗ್ ಅಹಲ್ವಾತ್, ಇನ್ಸ್ಪೆಕ್ಟರ್ ಧರ್ಮಪಾಲ್ ಸಿಂಗ್, ಸಬ್ ಇನ್ಸ್ಪೆಕ್ಟರ್ ಮಹಾವೀರ್ ಸಿಂಗ್ ಹಾಗೂ ಇತರ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೂರಿನಲ್ಲಿ ಕೋರಲಾಗಿದೆ. ಈ ಸಂಬಂಧ ವಿಚಾರಣೆಯನ್ನು ನ್ಯಾಯಾಲಯ, ಏಪ್ರಿಲ್ 29ಕ್ಕೆ ಕಾಯ್ದಿರಿಸಿದೆ.