ಬೆಂಗಳೂರು: ಉಸಿರು ಬಿಗಿಹಿಡಿದು ತಮ್ಮವರನ್ನು ಸೇರಲು ಕಾದ ಪುಟಾಣಿಗಳ ಕಣ್ಣುಗಳಲ್ಲಿ ಕಾತರ. ಎಷ್ಟೋ ದಿನಗಳ ನಂತರ ಕರುಳಕುಡಿಗಳನ್ನು ಕಾಣಲು ಚಡಪಡಿಸುತ್ತಿದ್ದ ತಾಯಿತಂದೆಯರು ಮತ್ತು
ಮಕ್ಕಳ ನಡುವೆ ತಡೆಯಾಗಿದ್ದದ್ದು ಕೇವಲ ಒಂದು ಬಾಗಿಲು.
ಅದು ತೆರೆದೊಡನೆ ನೆರೆಯಂತೆ ಉಕ್ಕಿಬಂದ ಪ್ರೀತಿ, ಮಮತೆ, ಅಪ್ಪುಗೆ ಮತ್ತು ಒಂದಷ್ಟು ಕಣ್ಣ ಹನಿಗಳ ಹೊರತು ಯಾವುದಕ್ಕೂ ಅಲ್ಲಿ ಸ್ಥಳವಿರಲಿಲ್ಲ.
ಚಿಕ್ಕಪುಟ್ಟ ಕಾರಣಗಳಿಗೆ ಮನೆ ಬಿಟ್ಟು ನಗರ ಪ್ರದೇಶಗಳಿಗೆ ಬರುವ ಮಕ್ಕಳನ್ನು ಪತ್ತೆ ಮಾಡಿ, ಪೋಷಕರೊಂದಿಗೆ ಒಂದುಗೂಡಿಸುವ ಮಕ್ಕಳ ಪುನರ್ಮಿಲನ ಶಿಬಿರದ ಅಂತಿಮ ಹಂತವಾಗಿ ಸಾಥಿ ಸಂಘಟನೆಯು ಶುಕ್ರವಾರ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಏರ್ಪಡಿಸಿದ್ದ ಕುಟುಂಬದೊಂದಿಗೆ ಮಕ್ಕಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.
ಸಾಥಿ ಸಂಘಟನೆಯ ಕಾರ್ಯದರ್ಶಿ ಪ್ರಮೋದ್ ಕುಲಕರ್ಣಿ, ‘ಮನೆಬಿಟ್ಟು ಓಡಿಹೋಗುವ ಮಕ್ಕಳು ಸಾಮಾನ್ಯವಾಗಿ ದೊಡ್ಡನಗರಗಳಿಗೆ ರೈಲುಗಳಲ್ಲಿ ಬರುತ್ತಾರೆ. ರೈಲುಗಳು ನಿಲ್ದಾಣಗಳಿಗೆ ಬರುವ ಸಮಯದಲ್ಲಿ ಅಂತಹವರನ್ನು ಪತ್ತೆ ಮಾಡಿ, ಕೌನ್ಸೆಲಿಂಗ್ ನಡೆಸಿ ಪೋಷಕರಿಗೆ ಒಪ್ಪಿಸಲಾಗುತ್ತದೆ’ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಆರ್. ಪಾಟೀಲ್ ಮಾತನಾಡಿ, ‘ಪೋಷಕರು ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಸಾಥಿಗೆ ರೈಲ್ವೆ ಇಲಾಖೆಯು ಹೆಚ್ಚಿನ ಸಹಕಾರ ನೀಡುವಂತೆ ರೈಲ್ವೆ ಸಚಿವರೊಂದಿಗೆ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು.
ಶಿಬಿರದ ಸಂಚಾಲಕ ಸುರೇಶ್, ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹೆಚ್ಚುವರಿ ವ್ಯವಸ್ಥಾಪಕಿ ಸುನಂದಾ ಅರುಲ್ ಉಪಸ್ಥಿತರಿದ್ದರು.