ರಾಜ್ಯ ಸರ್ಕಾರ ಪಶ್ಚಿಮಘಟ್ಟದ ಒಡಲೊಳಗೆ ಎತ್ತಿನಹೊಳೆ ಯೋಜನೆಯನ್ನು ಮಂಜೂರು ಮಾಡಿದ್ದು, ಅದರ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಲಾಗುವುದೆಂದು ಹೇಳುತ್ತಿದೆ.
8600 ಕೋಟಿ ರೂಪಾಯಿ ವೆಚ್ಚದ ಈ ಬಹತ್ ಯೋಜನೆಯಲ್ಲಿ ಎಂಟು ಅಣೆಕಟ್ಟೆಗಳನ್ನು ಕಟ್ಟಿ, ಸಕಲೇಶಪುರಕ್ಕೆ ನೀರನ್ನು ಹರಿಸುವುದಕ್ಕೆ 80-100 ಕಿ.ಮಿ ಉದ್ದದ ಪೈಪ್ಲೈನ್ ಮೂಲಕ 370 ಮೆಗಾವ್ಯಾಟ್ ವಿದ್ಯುಚ್ಛಕ್ತಿ ಬಳಸಲಾಗುವುದೆಂದು, ಎತ್ತರದ ಅಣೆಕಟ್ಟೆಗಳಿಂದ 100-175ಮಿ ಎತ್ತರಕ್ಕೆ ಏತ ನೀರಾವರಿಯ ಮೂಲಕ ನೀರು ಪಂಪು ಮಾಡುವುದಾಗಿಯೂ ಅಲ್ಲಿಂದ ಮುಂದಕ್ಕೆ ಇದೇ ರೀತಿಯ ಅವಾಸ್ತವಿಕ ಕಸರತ್ತುಗಳನ್ನು ನಾಲ್ಕು ಹಂತಗಳಲ್ಲಿ ಮಾಡಿ ಬಯಲು ಸೀಮೆಗೆ ನೀರನ್ನು ಹರಿಸುವ ಪ್ರಸ್ತಾವವನ್ನು ಸಾಧ್ಯತಾ ವರದಿಯಲ್ಲಿ ಉಲ್ಲೆೀಖಿಸಲಾಗಿದೆ.
ಈಗಾಗಲೇ ರಾಜ್ಯದಲ್ಲಿ ಏತ ನೀರಾವರಿ ವಿಫಲಗೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ನಾವು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಂತೆ, ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಖ್ಯವಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಪಡೆಯ ಬೇಕಾದ ಅನುಮತಿಯನ್ನು ರಾಜ್ಯ ಸರ್ಕಾರ ಪಡೆದಿಲ್ಲ.
ಇದುವರೆಗೂ ಪರಿಸರ ಪರಿಣಾಮ ವರದಿಯೇ ತಯಾರಾಗಿಲ್ಲ! ಎಲ್ಲಕ್ಕಿಂಥಾ ಮುಖ್ಯವಾಗಿ ಇದುವರೆಗೆ ಈ ಬಹತ್ ಯೋಜನೆಯಿದ ಸಂತ್ರಸ್ತಗೊಳ್ಳಲಿರುವ, ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಮಲೆನಾಡು ಹಾಗೂ ಕರಾವಳಿ ಪ್ರದೇಶದ ಜನರ ಸಾರ್ವಜನಿಕ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿಲ್ಲ. ಈಗಾಗಲೇ ಪಶ್ಚಿಮಘಟ್ಟದ ಒಡಲಿನಲ್ಲಿ ಕಾರ್ಯಗತಗೊಂಡಿರುವ ಹಲವಾರು ಅವೈಜ್ಞಾನಿಕ ಯೋಜನೆಗಳಿಂದಾಗಿ ಅಗಾಧ ಪ್ರಮಾಣದ ಅರಣ್ಯ ಸಂಪತ್ತು,ಪ್ರಾಣಿ ಪಕ್ಷಿಗಳು ನಾಶವಾಗಿದೆ.
ಅರಣ್ಯದಲ್ಲಿ ನಡೆಯುವ ಇಂತಹ ಯೋಜನೆಗಳಿಂದ ಶಾಶ್ವತ ಹಾನಿಗೀಡಾಗುವ ಒಟ್ಟು ಪರಿಸರ, ಜನಜೀವನವನ್ನು ಲೆಕ್ಕಿಸದೇ, ಯೋಜನೆಗಳನ್ನು ಸಿದ್ಧಪಡಿಸುವುದು ಸರಿಯಲ್ಲ. ಸರ್ಕಾರ, ಸಂತ್ರಸ್ತರಾಗುವ ಪ್ರದೇಶದ ಜನರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಿ ಮೊದಲು ಯೋಜನೆಯ ಸಾಧಕ- ಬಾಧಕಗಳ ಕುರಿತು, ಪರ್ಯಾಯ ನೀರಿನ ವ್ಯವಸ್ಥೆಯನ್ನು ಕುರಿತು ಚರ್ಚೆ ಮಾಡಲಿ ಎಂದು ಆಗ್ರಹಿಸುತ್ತೇವೆ.
ರೂಪ ಹಾಸನ; ಹೆಚ್.ಎ.ಕಿಶೋರ್ ಕುಮಾರ್, ಹಾಸನ; ಮಂಜುನಾಥ್ ದತ್ತ; ಆರ್.ಪಿ.ವೆಂಕಟೇಶಮೂರ್ತಿ; ಹೆಚ್.ಪಿ.ಮೋಹನ್; ಎಮ್.ಸಿ.ಡೋಂಗ್ರೆ, ಸುರೇಶ್; ರಾಮಚಂದ್ರ ಸ್ವಾಮಿ; ಅನುಗನಾಳು ಕೃಷ್ಣಮೂರ್ತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.