ಬೆಂಗಳೂರು: `ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಅವುಗಳನ್ನು ಹುಡುಕಿ ಗುರುತಿಸುವ ಕಾರ್ಯವಾಗಬೇಕು~ ಎಂದು ಗುಪ್ತಚರ ಇಲಾಖೆಯ ಐಜಿಪಿ ಗೋಪಾಲ್ ಬಿ. ಹೊಸೂರ್ ಹೇಳಿದರು.ಶ್ರೀ ಪುರಂದರ ಇಂಟರ್ನ್ಯಾಷನಲ್ ಟ್ರಸ್ಟ್ ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ `ಪುರಂದರ ದಾಸರ ಆರಾಧನಾ ಮಹೋತ್ಸವ ಮತ್ತು ಯುವ ಪುರಂದರ ಪ್ರಶಸ್ತಿ ಹಾಗೂ ಕರ್ನಾಟಕ ಹೆಮ್ಮೆ ಪ್ರಶಸ್ತಿ ಪ್ರದಾನ~ ಸಮಾರಂಭದಲ್ಲಿ ಅವರು ಮಾತನಾಡಿದರು.
`ಯಾವುದೇ ಪ್ರಶಸ್ತಿಗಳು ವ್ಯಕ್ತಿಯ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಪ್ರಶಸ್ತಿಗಳಿಂದ ಯಾರು ಬೀಗಬೇಕಿಲ್ಲ. ಅದರ ಬದಲಿಗೆ ತಮ್ಮ ಜವಾಬ್ದಾರಿಗಳನ್ನು ಅರಿತು ಅದರಂತೆ ಕಾರ್ಯ ನಿರ್ವಹಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ~ ಎಂದರು.
`ರಾಜ್ಯದ ಪೊಲೀಸ್ ಪಡೆಯಲ್ಲಿ ಒಟ್ಟು ಶೇ 4 ರಿಂದ 5 ರಷ್ಟು ಮಹಿಳಾ ಪೊಲೀಸರಿದ್ದಾರೆ. ಅವರ ದಕ್ಷ ಮತ್ತು ಪ್ರಾಮಾಣಿಕ ಕಾರ್ಯಗಳಿಂದ ಪೊಲೀಸ್ ಇಲಾಖೆಗೆ ಒಂದು ರೀತಿಯ ಶಕ್ತಿ ದೊರೆತಂತಾಗಿದೆ. ಪೊಲೀಸ್ ಪಡೆಯಲ್ಲಿ ಮಹಿಳಾ ಪೊಲೀಸರನ್ನು ಶೇ 10 ರಿಂದ 15 ರಷ್ಟು ಹೆಚ್ಚಿಸಲು ಪ್ರಯತ್ನಗಳು ನಡೆಯಬೇಕು. ನಮ್ಮ ಸಾಂಪ್ರದಾಯಿಕ ವಿಚಾರಗಳಿಂದ ಹೊರಬಂದು, ಮಹಿಳೆಯರಿಗೂ ಅವಕಾಶ ನೀಡಿದರೆ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬಲ್ಲರು~ ಎಂದು ಹೇಳಿದರು.
ಹರಿದಾಸ ಅಕಾಡೆಮಿ ಅಧ್ಯಕ್ಷ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ವಿಠಲ ಮಾತನಾಡಿ, `ಜಗತ್ತಿನ ಎಲ್ಲ ದೇಶಗಳಲ್ಲಿ ಪುರಂದರದಾಸರ ಆರಾಧನೆಯು ನಡೆಯುತ್ತಿದೆ. ಹೀಗೆ ಎಲ್ಲ ದೇಶಗಳಲ್ಲಿ ಆರಾಧನೆಗೊಳ್ಳುವ ಏಕೈಕ ದಾಸರೆಂದರೆ ಅವರು ಪುರಂದರದಾಸರಾಗಿದ್ದಾರೆ~ ಎಂದರು.
ಯುವ ಪುರಂದರ ಪ್ರಶಸ್ತಿ ಪುರಸ್ಕೃತರು: ಅನಿರುದ್ಧ ಶ್ರೀಧರ್, ಟಿ.ಎಸ್. ಅನ್ವಿತಾ, ಮಾನ್ಯ ಉಡುಪಿ, ತುಷಾರಾ ಎಲ್. ಆಚಾರ್ಯ, ಅನಿರುದ್ಧ ಎಸ್. ಭಾರ್ಗವ.
ಕರ್ನಾಟಕ ಹೆಮ್ಮೆ ಪ್ರಶಸ್ತಿ ಪುರಸ್ಕೃತರು: ದಕ್ಷಿಣ ಬೆಂಗಳೂರು ಡಿಸಿಪಿ ಸೋನಿಯಾ ನಾರಂಗ್, ಎಸ್ಪಿ ಸೀಮಾ ಮಿಶ್ರಿತೋಟಿ, ಇನ್ಸ್ಪೆಕ್ಟರ್ ವಿ.ಎಸ್.ಸೀಮಾ, ಉಪ ನಿರೀಕ್ಷಕಿ ಬಿ.ಸರೋಜಿನಿ, ಸಬ್ ಇನ್ಸ್ಪೆಕ್ಟರ್ ಶಾಂತಾ ಶೆಟ್ಟಿ, ಪೊಲೀಸ್ ಕಾನ್ಸ್ಟೇಬಲ್ಗಳಾದ ಎಚ್.ಪಿ. ಕವಿತಾ, ಶಕೀಲಾ, ಶ್ರೀರಂಗಮ್ಮ, ಆರ್.ತುಳಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.