ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಘಟನೆ: ಬಾಲಕಿ ಸೇರಿ ಐವರ ಆತ್ಮಹತ್ಯೆ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮತ್ತೀಕೆರೆಯಲ್ಲಿ ಭಾನುವಾರ ರಾತ್ರಿ ಮೌನ (23) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉತ್ತರಹಳ್ಳಿಯಲ್ಲಿ ಶ್ವೇತಾ (25) ಎಂಬುವರು ನೇಣು ಹಾಕಿಕೊಂಡಿದ್ದಾರೆ. ಜೆ.ಸಿ.ನಗರ ಕುರುಬರಹಳ್ಳಿಯಲ್ಲಿ ನಾಗರಾಜ್ (42) ಎಂಬ ಆಟೊ ಚಾಲಕ ಹಾಗೂ ಪಾದರಾಯನಪುರದಲ್ಲಿ ಸೈಯ್ಯದ್ ಸಾದಿಕ್ (24) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮತ್ತೀಕೆರೆ ಐದನೇ ಅಡ್ಡರಸ್ತೆ ನಿವಾಸಿ ನರಸಿಂಹರಾಜು ಎಂಬುವರ ಮಗಳಾದ ಮೌನ, ಖಾಸಗಿ ಕಾಲೇಜಿನಲ್ಲಿ ಎಂ.ಟೆಕ್ ಓದುತ್ತಿದ್ದರು. ಕುಟುಂಬ ಸದಸ್ಯರೆಲ್ಲಾ ನಿದ್ರೆ ಮಾಡುತ್ತ್ದ್ದಿದ ಸಂದರ್ಭದಲ್ಲಿ ಅವರು ಕೊಠಡಿಯೊಂದರಲ್ಲಿ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಯಶವಂತಪುರ ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಾಗಿದೆ.

ಉತ್ತರಹಳ್ಳಿ: ಶ್ವೇತಾ ಅವರು ಪತಿ ಲೋಕೇಶ್ ಜತೆ ಉತ್ತರಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ವಿವಾಹವಾಗಿ ಆರು ವರ್ಷವಾಗಿತ್ತು. ಲೋಕೇಶ್ ಮಕ್ಕಳ ಜತೆ ಹೊರಗೆ ಹೋಗಿದ್ದಾಗ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ.

`ಲೋಕೇಶ್ ವರದಕ್ಷಿಣೆ ಹಣಕ್ಕಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಗಳು ಅಳಲು ತೋಡಿಕೊಂಡಿದ್ದಳು. ಮಗಳ ಸಾವಿಗೆ ಅಳಿಯನೇ ಕಾರಣ' ಎಂದು ಶ್ವೇತಾ ಅವರ ತಾಯಿ ಸಣ್ಣತಾಯಮ್ಮ ಅವರು ದೂರು ಕೊಟ್ಟಿದ್ದಾರೆ. ವರದಕ್ಷಿಣೆ ಸಾವು ಪ್ರಕರಣ ದಾಖಲಿಸಿಕೊಂಡು ಲೋಕೇಶ್‌ನನ್ನು ಬಂಧಿಸಲಾಗಿದೆ ಎಂದು ಸುಬ್ರಹ್ಮಣ್ಯಪುರ ಪೊಲೀಸರು ಹೇಳಿದ್ದಾರೆ.

ಕುರುಬರಹಳ್ಳಿ: ನಾಗರಾಜ್, ಪತ್ನಿ ರಾಜೇಶ್ವರಿ ಮತ್ತು ಮಗುವಿನೊಂದಿಗೆ ಕುರುಬರಹಳ್ಳಿ 15ನೇ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪತ್ನಿ ಮಗುವಿನೊಂದಿಗೆ ಹೊರಗೆ ಹೋಗಿದ್ದಾಗ ಅವರು ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಾಲಕ್ಷ್ಮಿಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಾದರಾಯನಪುರ: ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಸಾದಿಕ್, ಕುಟುಂಬ ಸದಸ್ಯರೆಲ್ಲಾ ಮನೆಯಿಂದ ಹೊರಗೆ ಹೋಗಿದ್ದಾಗ ನೇಣು ಹಾಕಿಕೊಂಡಿದ್ದಾರೆ. ಜಗಜೀವನರಾಂನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕಿ ಆತ್ಮಹತ್ಯೆ: ಟಿ.ವಿಯಲ್ಲಿ ಮೆಚ್ಚಿನ ಕಾರ್ಯಕ್ರಮ ನೋಡುವ ವಿಷಯವಾಗಿ ಸಹೋದರನ ಜತೆ ಜಗಳವಾಗಿದ್ದರಿಂದ ಬೇಸರಗೊಂಡ ನವನೀತಾ (11) ಎಂಬ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೋಡಿ ಸಮೀಪದ ಜೈ ಬಿಮಾನಗರದಲ್ಲಿ ಭಾನುವಾರ ನಡೆದಿದೆ. ಜೈ ಬಿಮಾನಗರದಲ್ಲಿ ವಾಸವಾಗಿರುವ ಕುಮಾರ್ ಮತ್ತು ರಾಣಿ ದಂಪತಿಯ ಮಗಳಾದ ನವನೀತಾ, ಸಾದರಮಂಗಲದ ಖಾಸಗಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದಳು. ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ನವನೀತಾ ಮತ್ತು ಆಕೆಯ ಅಣ್ಣ ನವೀನ್ ನಡುವೆ ಟಿ.ವಿ ನೋಡುವ ವಿಷಯವಾಗಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ವಾಗ್ವಾದ ನಡೆದು ಜಗಳವಾಗಿದೆ. ಇದರಿಂದ ಬೇಸರಗೊಂಡ ಆಕೆ ಮಲಗುವ ಕೊಠಡಿಗೆ ಹೋಗಿ ನೇಣು ಹಾಕಿಕೊಂಡಿದ್ದಾಳೆ. ರಾಣಿ ಅವರು ಮಗಳನ್ನು ಊಟಕ್ಕೆ ಕರೆಯಲು ಕೊಠಡಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಕುಮಾರ್, ಚಾಲಕರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT