ನವದೆಹಲಿ (ಪಿಟಿಐ): ಪ್ರಧಾನಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಿಜೆಪಿಯ ವಿವೇಚನೆಗೆ ಬಿಟ್ಟದ್ದು, ಇದರಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಸ್ಪಷ್ಟಪಡಿಸಿದೆ.
ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನೇ ಬಿಜೆಪಿಯ ಪ್ರಧಾನಿ ಸ್ಥಾನದ ಅಭ್ಯರ್ಥಿಯನ್ನಾಗಿ ಬಿಂಬಿಸಬೇಕು ಎಂದು ರಾಜ್ಯ ಸಭಾ ಸದಸ್ಯ ರಾಂ ಜೇಠ್ಮಲಾನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ತಮ್ಮ ಸಹಮತ ಇದೆ ಎಂದು ಆರ್ಎಸ್ಎಸ್ ವರಿಷ್ಠ ಮೋಹನ್ ಭಾಗವತ್ ಅವರು ತಿಳಿಸಿದ್ದಾರೆ ಎಂದು ಜೇಠ್ಮಲಾನಿ ಹೇಳಿದುದಕ್ಕೆ ಪ್ರತಿಯಾಗಿ ಆರ್ಎಸ್ಎಸ್ ಮುಖಂಡ ರಾಮ್ ಮಾಧವ್ ಈ ಸ್ಪಷ್ಟನೆ ನೀಡಿದ್ದಾರೆ.
`ಈ ವಿಷಯದಲ್ಲಿ ಉನ್ನತ ನಾಯಕರ ಸಭೆಗಳು ನಡೆಯಬೇಕಾಗುತ್ತದೆ, ನಿಮ್ಮ ಅಭಿಪ್ರಾಯಕ್ಕೆ ಭಾಗವತ್ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನುವುದನ್ನು ಆಗಷ್ಟೇ ತಿಳಿಯಲು ಸಾಧ್ಯ, ನಿಮ್ಮದು ಒಂದು ಅಭಿಪ್ರಾಯವಾಗಿದ್ದರೆ ಮತ್ತೊಂದು ರೀತಿಯ ಅಭಿಪ್ರಾಯವನ್ನೂ ಸಂಘದ ಮುಖ್ಯಸ್ಥರೇ ಹೇಳುತ್ತಾರೆ~ ಎಂದು ಹೇಳಿದರು.
ಪ್ರಧಾನಿ ಸ್ಥಾನದ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಬಿಜೆಪಿ ಪಕ್ಷವೇ ನಿರ್ಧರಿಸಬೇಕೆ ಹೊರತು ಯಾರೋ ಈ ಬಗ್ಗೆ ಗುಲ್ಲೆಬ್ಬಿಸುವುಸು ಸರಿಯಲ್ಲ, ಈ ರೀತಿಯ ನಿಲುವನ್ನು ಸಂಘ ಮೊದಲಿನಿಂದಲೂ ಹೊಂದಿದೆ ಎಂದರು.