ಅಹಮದಾಬಾದ್ (ಐಎಎನ್ಎಸ್): ‘ಗುಜರಾತ್ ಸಚಿವರೊಬ್ಬರ ವಿರುದ್ಧ ಕ್ರಮ ಕೈಗೊಂಡಿದ್ದರಿಂದಲೇ ಬಿಜೆಪಿ ತಮ್ಮ ಸರ್ಕಾರದ ವಿರುದ್ಧ ವ್ಯತಿರಿಕ್ತವಾಗಿ ವರ್ತಿಸುತ್ತಿದೆ’ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿರುವುದು ‘2011ರ ದೊಡ್ಡ ತಮಾಷೆ’ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.
‘ನಿಮ್ಮಿಂದ (ಪ್ರಧಾನಿ) ಏನನ್ನೂ ಮಾಡಲು ಸಾಧ್ಯವಿಲ್ಲ. ಅಸಹಾಯಕರಾಗಿದ್ದಿರಿ. ಜತೆಗೆ ನಿಮ್ಮ ಸಂಕಷ್ಟಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದೀರಿ. ಹಾಗಾಗಿ ನಿಮ್ಮ ಕಷ್ಟಗಳಿಗೆ ಬೇರೆಯವರನ್ನು ಬೊಟ್ಟು ಮಾಡಿ ತೋರಿಸುವ ಅಗತ್ಯ ಇಲ್ಲ. ಅದರಲ್ಲೂ ಗುಜರಾತ್ನ ಸಚಿವರನ್ನು ಈ ವಿಷಯಕ್ಕೆ ಎಳೆದು ತರುವ ಅವಶ್ಯಕತೆ ಇಲ್ಲ’ ಎಂದಿರುವ ಮೋದಿ, ಪ್ರಧಾನಿ ಹೇಳಿಕೆ ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ಬಣ್ಣಿಸಿದ್ದಾರೆ.
ದೇಶಾದ್ಯಂತ ಏಕ ರೂಪ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ತರುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿವೆ. ಪ್ರಮುಖವಾಗಿ ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳು ಇದಕ್ಕೆ ಸಹಕರಿಸುತ್ತಿಲ್ಲ ಎಂದು ಬುಧವಾರ ಟಿವಿ ಸಂಪಾದಕರೊಂದಿಗಿನ ತಮ್ಮ ಸಂವಾದದಲ್ಲಿ ಪ್ರಧಾನಿ ಸಿಂಗ್ ಹೇಳಿದ್ದರು. ಗುಜರಾತ್ನಲ್ಲಿ ಸಚಿವರೊಬ್ಬರ ವಿರುದ್ಧ ಕ್ರಮ ಕೈಗೊಂಡಿದ್ದೇ, ಬಿಜೆಪಿ ಸರ್ಕಾರದ ಧೋರಣೆಯಲ್ಲಿ ಅಡ್ಡಗಾಲು ಹಾಕಲು ಕಾರಣವಾಗಿದೆ ಎಂದೂ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು.