ಬೆಂಗಳೂರು (ಪಿಟಿಐ): ಯಾವುದೇ ಆಧಾರವಿಲ್ಲದೇ ತಮಿಳುನಾಡಿಗೆ 9000 ಕ್ಯೂಸೆಕ್ಸ್ ನೀರು ಬಿಡಬೇಕೆಂಬ ಪ್ರಧಾನಿ ಮಂತ್ರಿ ನೇತೃತ್ವದ `ಕಾವೇರಿ ನದಿ ಪ್ರಾಧಿಕಾರ~ದ (ಸಿಆರ್ಎ) ನಿರ್ದೇಶನದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬುಧವಾರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಸಿಆರ್ಎ ನಿರ್ದೇಶನಕ್ಕೆ ಯಾವುದೇ ಆಧಾರವಿಲ್ಲ. ಅಲ್ಲದೇ ಆ ನಿರ್ದೇಶನವನ್ನು ಸರಿಯಾದ ಚರ್ಚೆ ನಡೆಸದೆ ತೆಗೆದುಕೊಳ್ಳಲಾಗಿದೆ~ ಎಂದು ದೂರಿದರು.
ಸೆಪ್ಟೆಂಬರ್ 19ರಂದು ನಡೆದ ಸಭೆಯಲ್ಲಿ ತಾವು ಪ್ರಧಾನಿಯವರಿಗೆ ಈ ನಿರ್ದೇಶನದಿಂದ ಕರ್ನಾಟಕಕ್ಕೆ ಅನ್ಯಾಯ ಹಾಗೂ ತೀವ್ರ ತೊಂದರೆಯಾಗಲಿದೆ ಎಂದು ತಿಳಿಸಿದ್ದೆ ಎಂದು ಶೆಟ್ಟರ್ ಹೇಳಿದರು.
ನಿರ್ದೇಶನ ನೀಡುವ ಮೊದಲು ರಾಜ್ಯದ ನೀರಿನ ಮೂಲಗಳ ವಾಸ್ತವಾಂಶ ಅರಿಯಲು ತಜ್ಞರ ಸಮೀತಿಯೊಂದನ್ನು ಕಳುಹಿಸಬೇಕು ಎಂಬ ಕರ್ನಾಟಕದ ಮನವಿಗೆ ಪ್ರಧಾನಿಯವರು ಸ್ಪಂದಿಸಲಿಲ್ಲ ಎಂದು ತಿಳಿಸಿದರು.
ಕಾವೇರಿ ನೀರು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಿಸಲು ಚಿಂತನೆ ನಡೆಸುತ್ತಿದೆಯಲ್ಲ ಎಂಬ ಪ್ರಶ್ನೆಗೆ ಶೆಟ್ಟರ್ ಅವರು `ಈ ಕುರಿತಂತೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು~ ಎಂದರು.
ಕರ್ನಾಟಕ ಹಾಗೂ ತಮಿಳುನಾಡು ನಡುವೆ ಉಲ್ಬಣಗೊಂಡಿರುವ ಕಾವೇರಿ ವಿವಾದ ಹಿನ್ನೆಲೆಯಲ್ಲಿ ಸಿಆರ್ಎ ನಿರ್ದೇಶನ ಪುನರ್ ಪರಿಶೀಲಿಸುವಂತೆ ಒತ್ತಡ ಹಾಕಲು ಮೂರು ದಿನಗಳಿಂದ ದೆಹಲಿಯಲ್ಲಿ ಪ್ರಧಾನಿ ಭೇಟಿಗಾಗಿ ಬೀಡು ಬಿಟ್ಟಿದ್ದ ಶೇಟ್ಟರ್ ಅವರಿಗೆ ಅವಕಾಶ ಸಿಗದೆ ನಿರಾಸೆಯಿಂದ ಮಂಗಳವಾರ ನಗರಕ್ಕೆ ವಾಪಸಾಗಿದ್ದರು.