ಕೊಳ್ಳೇಗಾಲ: `ಗ್ರಾಮೀಣ ಜನರು ಬುದ್ಧನ ಪಂಚಶೀಲ ತತ್ವ ಅಳವಡಿಸಿಕೊಂಡರೆ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ~ ಎಂದು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.
ತಾಲ್ಲೂಕಿನ ಚೆನ್ನಾಲಿಂಗನಹಳ್ಳಿ ಸಮೀಪದ ಜೇತವನ ಬುದ್ಧ ವಿಹಾರದಲ್ಲಿ ಭಾನುವಾರ ಏರ್ಪಡಿಸಿದ್ದ `ಪ್ರಬುದ್ಧ ಭಾರತ ನಿರ್ಮಾಣಕ್ಕೆ ಪಂಚಶೀಲ ಪಾದಯಾತ್ರೆ~ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜೇತವನ ಬುದ್ಧ ವಿಹಾರದಲ್ಲಿ ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಸರ್ಕಾರದಿಂದ ಹೆಚ್ಚಿನ ಹಣ ದೊರಕಿಸುವುದಾಗಿ ಅವರು ಭರವಸೆ ನೀಡಿದರು.
ಶಾಸಕ ಆರ್.ನರೇಂದ್ರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಲಕ್ಷಾಂತರ ಹಣ ಖರ್ಚಾಗಿ ಭವನಗಳು ದೂಳು ಹಿಡಿಯುತ್ತಿವೆ. ಈ ಭವನಗಳು ಅಧ್ಯಯನ ಕೇಂದ್ರಗಳಾಗಿ ಪರಿವರ್ತನೆಗೊಳ್ಳಬೇಕಿದೆ ಎಂದರು.
ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಪರಿಶಿಷ್ಟ ಜನಾಂಗಕ್ಕೆ ದೊರೆಯ ಬೇಕಾದ ಸೌಲಭ್ಯಗಳನ್ನು ಇತರರು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಬಂತೇಜಿ, ಬೋಧಿರತ್ನ ಹಾಗೂ ಮನೋರಖ್ಖಿತ ಅವರು ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ದತ್ತೇಶ್ಕುಮಾರ್, ಮಾಜಿ ಶಾಸಕ ಎಸ್.ಜಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ದೇವರಾಜು, ನಿವೃತ್ತ ಜಂಟಿ ನಿರ್ದೇಶಕ ಆರ್.ಮಹದೇವಪ್ಪ, ಡಾ.ಕೃಷ್ಣ, ನಗರಸಭೆ ಸದಸ್ಯ ಮುಡಿಗುಂಡ ಶಾಂತರಾಜು, ಸಾಹಿತಿ ಶಂಕನಪುರ ಮಹದೇವ, ಜಗದೀಶ್, ರಾಜಶೇಖರಮೂರ್ತಿ, ಶೇಖರ್ಬುದ್ಧ, ನಾಗರಾಜು, ನಗರಸಭೆ ಸದಸ್ಯ ಚಂದ್ರು, ಚೌಡಮ್ಮ, ಕೆ.ಕೆ.ಮೂರ್ತಿ ಇದ್ದರು.