ಹಿರೇಕೆರೂರ: ‘ಪ್ರತಿಯೊಬ್ಬ ನಾಗರಿಕರು ಸಂಚಾರಿ ನಿಯಮಾವಳಿಅರಿತು ಅವುಗಳನ್ನು ತಪ್ಪದೇ ಪಾಲಿಸಬೇಕು. ಪ್ರಯಾಣಿಕರ ಸುರಕ್ಷತೆಗೆ ವಾಹನ ಚಾಲಕರು ಪ್ರಥಮ ಆದ್ಯತೆ ನೀಡಬೇಕು’ ಎಂದು ಸಿಪಿಐ ಎಚ್. ಶೇಖರಪ್ಪ ತಿಳಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಂಜೆ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಆಟೋ ಮತ್ತು ಟೆಂಪೋ ಚಾಲಕರನ್ನುದ್ದೇಶಿಸಿ ಅವರು ಮಾತನಾಡಿದರು.
ರಸ್ತೆ ಸುರಕ್ಷತಾ ನಿಯಮಗಳನ್ನು ತಿಳಿದುಕೊಳ್ಳುವುದರಿಂದ ಅಪಘಾತ ತಡೆಯಲು ಸಾಧ್ಯವಿದೆ. ಮನಸ್ಸಿಗೆ ಬಂದಂತೆ ವಾಹನ ಓಡಿಸುವುದು ಹಾಗೂ ನಿಯಮಾವಳಿಗಳ ಉಲ್ಲಂಘನೆ ಶಿಕ್ಷೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು. ಪಿಎಸ್ಐ ಬಸವರಾಜ ಕಲ್ಲಮ್ಮನವರ, ದೇಶಾದ್ಯಂತ ಪ್ರತಿ ವರ್ಷ ಜನವರಿ ಮೊದಲನೇ ವಾರದಲ್ಲಿ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಲು ಸುರಕ್ಷತಾ ಸಪ್ತಾಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ.ಪಂ. ಉಪಾಧ್ಯಕ್ಷ ರಾಮಣ್ಣ ಗುಡ್ಡಳ್ಳಿ, ರಮೇಶ ಹಡಗದ, ಮುಖ್ಯ ಪೇದೆ ಬಿ.ಎಂ.ಜುಮ್ಮಣ್ಣನವರ, ಡಿ.ಜಿ. ಇಂಗಳಗೊಂದಿ, ಎಂ.ಟಿ. ಕರಿಯಣ್ಣನವರ, ಎಲ್.ಎಚ್. ಅಗಸಿಬಾಗಿಲ, ಸುರೇಶ ನಿಡನೇಗಿಲು, ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜು ಬತ್ತೇರ, ಟೆಂಪೋ ಚಾಲಕರ ಸಂಘದ ಅಧ್ಯಕ್ಷ ಸುರೇಶ ಕುಂಕುಮಗಾರ ಸೇರಿದಂತೆ ಆಟೋ ಮತ್ತು ಟೆಂಪೋ ಚಾಲಕರು ಪಾಲ್ಗೊಂಡಿದ್ದರು.
ಸಪ್ತಾಹದ ಅಂಗವಾಗಿ ಆಟೋಗಳೊಂದಿಗೆ ಮೆರವಣಿಗೆ ನಡೆಯಿತು.