ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ ಶುಕ್ರವಾರ ಇಲ್ಲಿ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಟ್ರಿಯೂನ್ ಎಕ್ಸಿಬಿಟರ್ಸ್ ಪ್ರೈವೇಟ್ ಲಿಮಿಟೆಡ್ನ ಸಹಯೋಗದಲ್ಲಿ ಅರಮನೆ ಮೈದಾನದ `ತ್ರಿಪುರ ವಾಸಿನಿ~ಯಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ `ಆಹಾರ ಸಂಸ್ಕರಣೆ: ಆತಿಥ್ಯ~ ಮತ್ತು `ಪ್ರಯಾಣ ಮತ್ತು ಪ್ರವಾಸೋದ್ಯಮ~ ಕುರಿತ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಬೆಂಗಳೂರಿನಲ್ಲಿ ಈಗಾಗಲೇ ಜರ್ಮನಿ, ಥಾಯ್, ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಆಹಾರ ಲಭ್ಯವಾಗುತ್ತಿದೆ. ರಾಜ್ಯದ ಇತರ ಭಾಗಗಳಲ್ಲಿಯೂ ಈ ಆಹಾರ ವಿದೇಶಿಯರಿಗೆ ದೊರೆಯುವಂತಾಗಬೇಕು. ಇದು ಪ್ರವಾಸೋದ್ಯಮ ಬೆಳವಣಿಗೆಗೆ ನೆರವಾಗಲಿದೆ~ ಎಂದರು.
ಸಂಸದ ಪಿ.ಸಿ. ಮೋಹನ್, ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ಕೆ. ಶಿವಷಣ್ಮುಗಂ, ಉಪಾಧ್ಯಕ್ಷ ಆರ್. ಶಿವಕುಮಾರ್, ಟ್ರಿಯೂನ್ ಎಕ್ಸಿಬಿಟರ್ಸ್ನ ವ್ಯವಸ್ಥಾಪಕ ನಿರ್ದೇಶಕ ಸಿರಿಲ್ ಪೆರೈರ, ಎನ್ಎಸ್ಐಸಿ ವಲಯ ಪ್ರಧಾನ ವ್ಯವಸ್ಥಾಪಕ ಪಿ. ರವಿಕುಮಾರ್, ಎಫ್ಕೆಸಿಸಿಐ ಪ್ರದರ್ಶನ ಸಮಿತಿ ಅಧ್ಯಕ್ಷ ಪೆರಿಕಾಲ್ ಎಂ. ಸುಂದರ್ ಉಪಸ್ಥಿತರಿದ್ದರು.
ಈ ಪ್ರದರ್ಶನದಲ್ಲಿ ದೇಶದ 130 ಕಂಪೆನಿಗಳು ಭಾಗವಹಿಸಿವೆ. ಒಂದೆಡೆ ನಮ್ಮ ಆಹಾರ ಪದ್ಧತಿ, ಮತ್ತೊಂದೆಡೆ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಪ್ರವಾಸಿ ತಾಣಗಳು, ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಮಳಿಗೆ ತೆರೆಯಲಾಗಿದೆ. ಫೆ. 20ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ 30 ಸಾವಿರ ಮಂದಿ ಭಾಗವಹಿಸುವ ಅಂದಾಜಿದೆ.