ರಾಳೆಗಣ ಸಿದ್ಧಿ (ಪಿಟಿಐ): ~ಜಮ್ಮು ಕಾಶ್ಮೀರ್ ಕುರಿತಂತೆ ಜನಮತ ಗಣನೆ ನಡೆಯಬೇಕೆಂಬ ಪ್ರಶಾಂತ್ ಭೂಷಣ್ ಅವರ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ~ ಎಂದಿರುವ ಅಣ್ಣಾ ಹಜಾರೆ ಅವರು ~ಅದು ಅಣ್ಣಾ ತಂಡದ ಅಭಿಪ್ರಾಯವಲ್ಲ~ ಎಂದು ಶುಕ್ರವಾರ ತಿಳಿಸಿದ್ದಾರೆ.
~ಕಾಶ್ಮಿರ್ ಕುರಿತಂತೆ ಪ್ರಶಾಂತ್ ಭೂಷಣ್ ಅವರ ಹೇಳಿಕೆ ಅಣ್ಣಾ ತಂಡದ ಹೇಳಿಕೆಯಲ್ಲ. ಈ ಕುರಿತ ಅವರ ಹೇಳಿಕೆ ಅವರ ಸ್ವಂತದ್ದು. ಅವರ ಹೇಳಿಕೆಗೆ ಅಣ್ಣಾ ತಂಡ ಹೊಣೆಯಲ್ಲ. ನಾವು ಈ ವಿಷಯದಲ್ಲಿ ಅವರೊಂದಿಗೆ ಸಹಮತ ಹೊಂದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
~ಪ್ರಶಾಂತ ಭೂಷಣ್ ಅವರ ಹೇಳಿಕೆ ಸರಿಯಲ್ಲ. ಅದು ನಮ್ಮ ಅಭಿಪ್ರಾಯವೂ ಅಲ್ಲ~ ಎಂದೂ ಅವರು ವಿವರಣೆ ನೀಡಿದ್ದಾರೆ.
ಜಮ್ಮು ಕಾಶ್ಮೀರ ವಿಷಯದಲ್ಲಿ ಜನಮತ ಗಣನೆ ನಡೆಯಬೇಕೆಂದು ಪ್ರಶಾಂತ್ ಭೂಷಣ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬುಧವಾರ ಬಲಪಂಥೀಯ ಸಂಘಟನೆಗೆ ಸೇರಿದ್ದ ಮೂವರು ಯುವಕರು ನವದೆಹಲಿಯಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದರು.
~ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದಕ್ಕಾಗಿ ಎಲ್ಲದಕ್ಕೂ ಸಿದ್ಧ~ ಎಂದಿರುವ ಹಜಾರೆ ಅವರು, ~ಈ ಕುರಿತ ವಾದವಿವಾದ ನಿಲ್ಲಬೇಕು~ ಎಂದು ಆಶಿಸಿದರು.
ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ~ಪ್ರಶಾಂತ್ ಭೂಷಣ್ ಅವರನ್ನು ಅಣ್ಣಾ ತಂಡದಿಂದ ಹೊರಹಾಕಲಾಗುವುದೇ?~ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ~ಅದರ ಕುರಿತು ನಂತರ ನಿರ್ಧಾರ ಕೈಗೊಳ್ಳಲಾಗುವುದು~ ಎಂದರು.
ಸದ್ಯ ಆ್ಯಮ್ಸಟರ್ ಡ್ಯಾಂನಲ್ಲಿರುವ ಅಣ್ಣಾ ತಂಡದ ಇನ್ನೊಬ್ಬ ಸದಸ್ಯರಾದ ಕಿರಣ್ ಬೇಡಿ ಅವರು, ಭರತ್ ಭೂಷಣ್ ಅವರ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ ಎಂದು ಗುರುವಾರ ಪ್ರತಿಕ್ರಿಯೆ ನೀಡಿದ್ದರು.