ಬೆಂಗಳೂರು: `ಪ್ರಶ್ನೆ ಕೇಳುವವರು ಮಾತ್ರ ಉತ್ತಮ ವಿಜ್ಞಾನಿಗಳಾಗಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು~ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ.ಜ್ಯೂಲ್ಸ್ ಎ. ಹಾಫ್ಮನ್ ಸಲಹೆ ನೀಡಿದರು.
ಜಯನಗರದ ನ್ಯಾಷನಲ್ ಕಾಲೇಜು ಆವರಣದಲ್ಲಿ ನಿರ್ಮಿಸಲಾದ `ಡಾ.ಪಿ. ಸದಾನಂದ ಮಯ್ಯ ಸಂಕೀರ್ಣ~ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. `ವಿಜ್ಞಾನವನ್ನು ಪ್ರೀತಿಸಿ ಜೀವಿಸುವುದರ ಜತೆಗೆ ವಿಜ್ಞಾನದ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸಲು ಸದಾ ಉತ್ಸುಕರಾಗಬೇಕು.
ವಿಜ್ಞಾನದೊಂದಿಗೆ ಬೆರೆತಿರುವ ಸಾಹಿತ್ಯ ಮತ್ತು ತತ್ವಶಾಸ್ತ್ರಕ್ಕೆ ಅಷ್ಟೇ ಪ್ರಾಮುಖ್ಯತೆ ನೀಡಬೇಕು~ ಎಂದು ಕಿವಿಮಾತು ಹೇಳಿದರು. `ನೊಬೆಲ್ ಸ್ವೀಕರಿಸಿದ ನಂತರ ಭಾರತದ ಏಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ್ದೇನೆ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಬೋಧಕರ ಉತ್ಸಾಹ ಕಂಡು ಖುಷಿ ಪಟ್ಟಿದ್ದೇನೆ. ಸರ್ಕಾರಗಳು ವಿಜ್ಞಾನದ ಬೆಳವಣಿಗೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿವೆ~ ಎಂದು ಶ್ಲಾಘಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಪಿ.ಬಲರಾಮ್, `ವಿಜ್ಞಾನವನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ಉದ್ಯಮಿಗಳಿಂದ ಹೆಚ್ಚಿನ ಪಾಲು ತೆಗೆದುಕೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮಯ್ಯ ಅವರು ಉತ್ತಮ ಹೆಜ್ಜೆ ಇಟ್ಟಿದಾರೆ~ ಎಂದು ಹರ್ಷ ವ್ಯಕ್ತಪಡಿಸಿದರು.
ಡಾ.ಪಿ.ಸದಾನಂದ ಮಯ್ಯ ಮತ್ತು ಪತ್ನಿ ಸುನಂದಾ ಮಯ್ಯ ಅವರನ್ನು ಸನ್ಮಾನಿಸಲಾಯಿತು. ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ.ಎ.ಎಚ್.ರಾಮರಾವ್, ಶಾಸಕ ಬಿ.ಎನ್.ವಿಜಯಕುಮಾರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
60 ಸಾವಿರ ಚದರ ಅಡಿಯ ನಾಲ್ಕು ಅಂತಸ್ತಿನ ಸಂಕೀರ್ಣ
60 ಸಾವಿರ ಚದರ ಅಡಿ ವಿಸ್ತ್ರೀಣದಲ್ಲಿ ಒಟ್ಟು ನಾಲ್ಕು ಅಂತಸ್ತಿನ ಸಂಕೀರ್ಣವನ್ನು ನಿರ್ಮಾಣ ಮಾಡಲಾಗಿದೆ. 22 ಕೊಠಡಿಗಳಿದ್ದು, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಸುಸಜ್ಜಿತ ಎಂಟು ಪ್ರಯೋಗಾಲಯಗಳಿವೆ.
ಈ ಬಗ್ಗೆ ಮಾತನಾಡಿದ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿಯೂ ಆಗಿರುವ ಉದ್ಯಮಿ ಪಿ.ಸದಾನಂದ ಮಯ್ಯ, `ಸಂಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ಮರಳಿಸಬೇಕು ಎಂದು ಪೋಷಕರ ಹಿತನುಡಿಯನ್ನು ಅಕ್ಷರಶಃ ಪಾಲಿಸಿದ್ದೇನೆ~ ಎಂದು ತಿಳಿಸಿದರು.
ಆಡಳಿತ ಮಂಡಳಿಯ ಸಭೆಯೊಂದರಲ್ಲಿ ಡಾ.ಎ.ಎಚ್.ರಾಮರಾವ್ ಅವರು ಒಂದು ಸಂಕೀರ್ಣ ಅಗತ್ಯವಿದೆ ಎಂದು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.