ಕೋಲಾರ: ಪ್ರೇಮಿಸಲು ಒಪ್ಪದ ಯುವತಿಯೊಬ್ಬಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಯುವಕನೊಬ್ಬ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಗಾಂಧಿನಗರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಗಾಂಧೀನಗರದ ಸೌಮ್ಯ (24) ಹಲ್ಲೆಗೆ ಒಳಗಾದ ಯುವತಿ. ಶ್ರೀನಿವಾಸಪುರ ತಾಲ್ಲೂಕಿನ ಸೊಣ್ಣಪಲ್ಲಿಯ ನರಸಿಂಹಪ್ಪ (25) ಹಲ್ಲೆ ಮಾಡಿರುವ ಯುವಕ. ಈ ಇಬ್ಬರನ್ನೂ ನಗರ ಹೊರವಲಯದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಯನ್ನು ತಡೆಯಲು ಬಂದ ಯುವತಿಯ ತಂಗಿ ಸಂಧ್ಯಾ ಕೂಡ ಗಾಯಗೊಂಡಿದ್ದಾರೆ.
ವಿವರ: ಕೆಲವು ವರ್ಷಗಳಿಂದ ಈ ಇಬ್ಬರ ನಡುವೆ ಸ್ನೇಹವಿತ್ತು. ತನ್ನನ್ನು ಪ್ರೀತಿಸುವಂತೆ ಯುವಕ ಯುವತಿಯನ್ನು ಒತ್ತಾಯಿಸುತ್ತಿದ್ದ. ಆದರೆ ಆತನ ಕೋರಿಕೆಯನ್ನು ಯುವತಿ ನಿರಾಕರಿಸಿದ್ದಳು. ಬುಧವಾರ ಬೆಳಿಗ್ಗೆ ವಿಳಾಸ ಕೇಳುವ ನೆಪದಲ್ಲಿ ಮನೆಗೆ ಬಂದ ಯುವಕ ರಾಗಿ ಮುದ್ದೆ ತಯಾರಿಸುತ್ತಿದ್ದ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ.
ತಾನೂ ಕೂಡ ಸಮೀಪದ ಮನೆ ಮೇಲೆ ಹೋಗಿ ವಿದ್ಯುತ್ತಂತಿಯನ್ನು ಹಿಡಿದು ಆತ್ಮಹತ್ಯೆಗೆ ಯತ್ನಿಸಿದ. ವಿದ್ಯುದಾಘಾತದಿಂದ ದೂರಕ್ಕೆ ಎಸೆಯಲ್ಪಟ್ಟ ಆತ ಮತ್ತೆ ಮನೆಯೊಂದರ ಮಹಡಿ ಏರಿ ಅಲ್ಲಿಂದ ಜಿಗಿದ ಎಂದು ಸ್ಥಳೀಯರು ಹೇಳುತ್ತಾರೆ. ಗಲ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.