ಸಿಂಗಪುರ (ಪಿಟಿಐ): ನೆಹರು ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ವಿಶ್ವಾಸದಿಂದ ಬೀಗುತ್ತಿರುವ ಭಾರತ ಫುಟ್ಬಾಲ್ ತಂಡ ಮಂಗಳವಾರ ಇಲ್ಲಿ ನಡೆಯಲಿರುವ ಫಿಫಾ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಸಿಂಗಪುರ ಎದುರು ಸೆಣಸಲಿದೆ.
ನೆಹರು ಕಪ್ನಲ್ಲಿ `ಹ್ಯಾಟ್ರಿಕ್~ ಪ್ರಶಸ್ತಿ ಗೆದ್ದಿರುವ ವಿಮ್ ಕೊವೆರ್ಮನ್ಸ್ ಮಾರ್ಗದರ್ಶನದ ಭಾರತ ಗೆಲುವು ಸಾಧಿಸುವ ವಿಶ್ವಾಸ ಹೊಂದಿದೆ. ಫಿಫಾ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 168ನೇ ರ್ಯಾಂಕ್ ಹೊಂದಿದೆ. ಆತಿಥೇಯರು 162ನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡಕ್ಕೆ ಪ್ರಮುಖ ಆಟಗಾರರು ಲಭ್ಯರಿದ್ದಾರೆ. ಆತಿಥೇಯ ತಂಡದಲ್ಲಿ ಕೆಲ ಪ್ರಮುಖ ಆಟಗಾರರ ಕೊರತೆ ಇದೆ. ನಾಯಕ ಶಾಹ್ರಿಲ್ ಇಶಾಕ್ ಅವರ ಅನುಪಸ್ಥಿತಿಯೂ ತಂಡವನ್ನು ಕಾಡುತ್ತಿದೆ. ಈ ಕಾರಣದಿಂದ ಎದುರಾಳಿ ತಂಡವನ್ನು ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹಿಂದಿನ ಪಂದ್ಯಗಳಲ್ಲಿನ ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿ
ಉಭಯ ತಂಡಗಳು ಒಟ್ಟು 15 ಸಲ ಮುಖಾಮುಖಿಯಾಗಿವೆ. ಸಿಂಗಪುರ ಏಳು ಸಲ ಹಾಗೂ ಭಾರತ ಆರು ಬಾರಿ ಜಯ ಗಳಿಸಿದೆ. 2006ರ ಫಿಫಾ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾದಾಗ ಸಿಂಗಪುರ 2-0ಗೋಲುಗಳಿಂದ ಭಾರತಕ್ಕೆ ಸೋಲುಣಿಸಿತ್ತು.
`ಪ್ರದರ್ಶನ ಮಟ್ಟದಲ್ಲಿ ಸುಧಾರಣೆ ಕಂಡುಕೊಳ್ಳಲು ಈ ಪಂದ್ಯ ವೇದಿಕೆಯಾಗಿದೆ. ಆದರೆ ಈ ಪಂದ್ಯ ಅತ್ಯಂತ ಕಠಿಣವಾಗಿರಲಿದೆ~ ಎಂದು ಭಾರತ ತಂಡದ ಕೋಚ್ ಕೊವೆರ್ಮನ್ ತಿಳಿಸಿದರು.