ಮಂಡ್ಯ: ಇದುವರೆಗೂ ಮತದಾರರಿಗೆ ಕರಪತ್ರಗಳನ್ನು ಹಂಚುವ ಮೂಲಕ ಮತಯಾಚಿಸುತ್ತಿದ್ದ ಜಿಲ್ಲೆಯ ಕೆಲ ರಾಜಕಾರಣಿಗಳು ಈಗ ಹೈಟೆಕ್ ಆಗಿದ್ದು, ಸಾಮಾಜಿಕ ಜಾಲ ತಾಣದಲ್ಲೂ ಪ್ರಚಾರ ಆರಂಭಿಸಿದ್ದಾರೆ.
ಡಿಜಿಟಲ್ ಕ್ಷೇತ್ರದಲ್ಲಿನ ಹೊಸತನಕ್ಕೆ ತೆರೆದುಕೊಂಡಿರುವ ರಾಜಕಾರಣಿಗಳು, `ಫೇಸ್ ಬುಕ್', `ಟ್ವಿಟರ್'ನಂಥ ಸಾಮಾಜಿಕ ಜಾಲ ತಾಣದ ಮೂಲಕವೂ ಪ್ರಚಾರ ಆರಂಭಿಸಿ, ಮತ ಬೇಡುತ್ತಿದ್ದಾರೆ.
ಪ್ರತಿಯೊಬ್ಬ ಅಭ್ಯರ್ಥಿಯೂ ಪ್ರತಿನಿತ್ಯ ಆಯಾಯ ದಿನದ ಫೋಟೊ, ವಿಡಿಯೊ ತುಣುಕುಗಳು, ಮಾಧ್ಯಮಗಳಲ್ಲಿ ಪ್ರಕಟವಾದಂತಹ ಸುದ್ದಿಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುತ್ತಿದ್ದಾರೆ.
ಸ್ವಂತ ಅಕೌಂಟ್ ಹೊಂದಿರುವ ಕೆಲವರು ಚುನಾವಣಾ ಬ್ಯೂಸಿ ಷೆಡ್ಯೂಲ್ ನಡುವೆಯೂ, ಕೆಲ ಪ್ರತಿಕ್ರಿಯೆಗಳಿಗೆ ತಾವೇ ಉತ್ತರಿಸುತ್ತಿದ್ದಾರೆ. ಬಹುತೇಕರ ಅಕೌಂಟ್ಗಳನ್ನು ಅಭಿಮಾನಿಗಳು, ಬೆಂಬಲಿಗರೇ ನಿಭಾಯಿಸುತ್ತಿದ್ದಾರೆ.
ಕೇಂದ್ರ ಮಾಜಿ ಸಚಿವ ಅಂಬರೀಷ್, ಸಂಸದ ಎನ್. ಚಲುವರಾಯಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ, ಅಶೋಕ್ ಎಸ್.ಡಿ. ಜಯರಾಂ, ಮಧು ಜಿ.ಮಾದೇಗೌಡ, ಕೆ.ಬಿ.ಚಂದ್ರಶೇಖರ್, ಎ.ಬಿ.ರಮೇಶ್ಬಾಬು ಬಂಡಿಸಿದ್ದೇಗೌಡ, ಎಲ್.ಡಿ.ರವಿ ಸೇರಿದಂತೆ ಅನೇಕರ ಹೆಸರಿನಲ್ಲಿ ಖಾತೆಗಳಿವೆ.
`ತಮಗೆ ಏಕೆ ಮತ ನೀಡಬೇಕು; ಕ್ಷೇತ್ರದ ಅಭಿವೃದ್ಧಿಗೆ-ಜನರ ಕಲ್ಯಾಣಕ್ಕೆ ತಮ್ಮ ದೂರದೃಷ್ಟಿ ಏನು?, ಗೆದ್ದು ಬಂದರೆ, ಕ್ಷೇತ್ರದಲ್ಲಿ ಕೈಗೊಳ್ಳುವ ಕೆಲಸಗಳು ಸೇರಿದಂತೆ ಅನೇಕ ಭರವಸೆಗಳನ್ನು ಈ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಕ್ಷೇತ್ರದ ಮತದಾರರಷ್ಟೇ ಅಲ್ಲದೇ, ಅಭ್ಯರ್ಥಿಗಳ ಅಭಿಮಾನಿಗಳು-ಹಿತೈಷಿಗಳು ಹಾಗೂ ಆಸಕ್ತರು ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತಿದೆ.
ಅಷ್ಟೇ ಅಲ್ಲದೆ, ಎಸ್ಎಂಎಸ್ ಮೂಲಕ ಮತಯಾಚಿಸಲಾಗುತ್ತಿದ್ದು, ಸಭೆ-ಸಮಾರಂಭಗಳಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಈ ಮೂಲಕವೇ ಆಹ್ವಾನ ನೀಡಲಾಗುತ್ತಿದೆ.
ಫ್ಲೆಕ್ಸ್, ಬಂಟಿಂಗ್ಸ್ ಬಳಕೆ ಸೇರಿದಂತೆ ಅದ್ದೂರಿ ಪ್ರಚಾರಕ್ಕೆ ಚುನಾವಣಾ ಆಯೋಗವು ಕಡಿವಾಣ ಹಾಕಿದೆ. ಪ್ರಜ್ಞಾವಂತ ಮತದಾರರನ್ನು ತಲುಪುಲು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ. ಮತದಾರರನ್ನು ಮನಗೆಲ್ಲಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಬಳಸಿಕೊಳ್ಳುತ್ತಿದ್ದಾರೆ.
-ಕೆ. ಚೇತನ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.