ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಾಣಗೊಳ್ಳಲಿರುವ ಚತುಷ್ಪಥ ಯೋಜನೆಯಡಿಯಲ್ಲಿ ಕುಂದಾಪುರ ನಗರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಫ್ಲೈಓವರ್ ಮಾಡಬೇಕು ಎನ್ನುವ ಸ್ಥಳೀಯರ ಮನವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಕೇಂದ್ರ ಆರ್ಥಿಕ ಇಲಾಖೆಗೆ ಪ್ರಾಸ್ತಾವನೆ ಕಳುಹಿಸಿದ್ದು, ಮಂಜೂರಾತಿಗೆ ಬಾಕಿ ಇದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಭಾನುವಾರ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ `ಕಾಂಗ್ರೆಸ್ಗೆ ಬನ್ನಿ -ಬದಲಾವಣೆ ತನ್ನಿ~ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ ಸ್ಥಿತಿಯ ಸುಧಾರಣೆಗಾಗಿ ಜಾರಿ ತಂದಿರುವ ಎಫ್ಡಿಐ ಕುರಿತು ಬಿಜೆಪಿ ಹಾಗೂ ಇತರ ರಾಜಕೀಯ ಪಕ್ಷಗಳು ಮಾಡುತ್ತಿರುವ ಟೀಕೆಗೆ ಅರ್ಥವಿಲ್ಲ. ವಿದೇಶಿ ನೇರ ಬಂಡವಾಳದ ಪ್ರಯೋಜನಗಳು ಈ ದೇಶದ ರೈತರು ಹಾಗೂ ಸಾಮಾನ್ಯ ಗ್ರಾಹಕರಿಗೆ ದೊರಕಲಿದೆ. ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದ ಯುಪಿಐ ಸರ್ಕಾರದ ಅನೇಕ ಯೋಜನೆಗಳು ರಾಜ್ಯಕ್ಕೆ ಬರುತ್ತಿದ್ದರೂ, ಅದನ್ನು ತಲುಪಬೇಕಾದವರಿಗೆ ತಲುಪಿಸದ ರಾಜ್ಯದ ಬಿಜೆಪಿ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡ ಕೆ.ಪ್ರತಾಪ್ಚಂದ್ರ ಶೆಟ್ಟಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯನ್ನು ತರುವ ಹೊಣೆ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ. ಸದ್ಯದ್ಲ್ಲಲೇ ಬರಲಿರುವ ಕುಂದಾಪುರದ ಪುರಸಭೆ ಚುನಾವಣೆ ಒಂದು ರೀತಿಯಲ್ಲಿ ಸೆಮಿ ಫೈನಲ್ ಇದ್ದಂತೆಇದರಲ್ಲಿ ವಿಜಯ ಗಳಿಸುವ ಮೂಲಕ ಗೆಲುವಿನ ಮೆಟ್ಟಿಲಿಗೆ ಅಡಿಪಾಯ ಹಾಕಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸಗಳು ಆಗಬೇಕಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ, ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷ ಬಿ.ಹಿರಿಯಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಪುತ್ರನ್ತಾಲ್ಲೂಕು ಪಂಚಾಯಿತಿ ಸದಸ್ಯ ಕೆದೂರು ಸದಾನಂದ ಶೆಟ್ಟಿ, ಮಾಜಿ ಜಿ.ಪಂ ಸದಸ್ಯೆ ರೇವತಿ ಶೆಟ್ಟಿ, ಪುರಸಭಾ ಸದಸ್ಯೆ ರವಿಕಲಾ, ಪರಿಶಿಷ್ಟ ಜಾತಿ ಮತ್ತು ಪಂಗಡದ ಇಲಾಖೆಯ ಅಧ್ಯಕ್ಷ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರುಗಾರ್ ಸ್ವಾಗತಿಸಿದರು, ವಿನೋದ್ ಕ್ರಾಸ್ತಾ ನಿರೂಪಿಸಿದರು, ಕೋಣಿ ನಾರಾಯಣ ಆಚಾರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.