ಕೆಜಿಎಫ್: ಕಡಪದಿಂದ ಮುಳಬಾಗಲು, ಬೇತಮಂಗಲ, ಕಮ್ಮಸಂದ್ರದ ಕೋಟಿಲಿಂಗೇಶ್ವರ ಮಾರ್ಗವಾಗಿ ಬೆಮಲ್ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗಕ್ಕೆ ಶೀಘ್ರ ಚಾಲನೆ ದೊರಕಲಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಊರಿಗಾಂಪೇಟೆಯಲ್ಲಿ ಕಾಂಗ್ರೆಸ್ ಮುಖಂಡರು ಕಟ್ಟಿಸಿದ ಹೆರಿಗೆ ವಾರ್ಡ್ಗಳನ್ನು ಶುಕ್ರವಾರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ತಾಲ್ಲೂಕಿಗೆ ಅನುಕೂಲವಾಗುವ ಬಂಗಾರಪೇಟೆ- ಮಾರಿಕುಪ್ಪಂ- ಕುಪ್ಪಂ ಮಾರ್ಗದ ಕಾಮಗಾರಿ ಕೂಡ ಶೀಘ್ರದಲ್ಲಿಯೇ ಪ್ರಾರಂಭವಾಗುವುದು. ಈ ಮೊದಲು ಇದ್ದ ಮಾರಿಕುಪ್ಪಂ-ಬಿಸಾನತ್ತಂ ಪ್ರಸ್ತಾವನೆ ಕೈಬಿಡಲಾಗಿದೆ ಎಂದರು.
ಚಿನ್ನದ ಗಣಿ ಪುನರುಜ್ಜೀವನ ಬಗ್ಗೆ ಪ್ರಸ್ತಾಪ ಮಾಡಿದ ಅವರು, ಚಿನ್ನದ ಗಣಿ ಪುನರಾರಂಭವಾಗದ್ದಕ್ಕೆ ಬಿಜಿಎಂಎಲ್ನ 21 ಕಾರ್ಮಿಕ ಸಂಘಗಳೇ ಕಾರಣ. ದೇಶದ ಯಾವುದೇ ರೋಗಗ್ರಸ್ಥ ಸಾರ್ವಜನಿಕ ಉದ್ದಿಮೆಯನ್ನು ಕೇಂದ್ರ ಸರ್ಕಾರ ಪುನರುಜ್ಜೀವನ ಮಾಡಲು ಒಪ್ಪಿಗೆ ನೀಡಿಲ್ಲ. ಬಿಜಿಎಂಎಲ್ ಪುನರುಜ್ಜೀವನಕ್ಕೆ ಮಾತ್ರ ಒಪ್ಪಿಗೆ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಜೊತೆ ಸಹಕರಿಸಿದರೆ ಗಣಿ ಪುನರಾರಂಭಿಸಬಹುದು. ಆದರೆ ಕೆಲವು ಕಾರ್ಮಿಕ ಸಂಘಗಳು ತರಲೆ ಮಾಡಿ ಪ್ರಸ್ತಾವನೆಯನ್ನು ಮೂಲೆಗೆ ತಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಬಿಜಿಎಂಎಲ್ ವಿಷಯ ಸುಪ್ರೀಂ ಕೋರ್ಟ್ ಮುಂದಿದೆ. ಕಾರ್ಮಿಕರ ಸಂಘಗಳ ಸಹಕಾರದೊಡನೆ ಗಣಿಗಾರಿಕೆ ಮಾಡುವುದು ಹಾಗೂ ವಿದೇಶಿ ಟೆಂಡರ್ ಕರೆಯುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಕೋರ್ಟಿನ ಮುಂದೆ ಇಟ್ಟಿದೆ. ಪ್ರಕರಣ ಶೀಘ್ರವಾಗಿ ಇತ್ಯರ್ಥವಾದರೆ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಮುನಿಯಪ್ಪ ಹೇಳಿದರು.
ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಮಾತನಾಡಿದರು. ಜಿ.ಪಂ. ಸದಸ್ಯರಾದ ಅ.ಮು. ಲಕ್ಷ್ಮೀನಾರಾಯಣ, ಆರ್.ನಾರಾಯಣರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ಮಾಜಿ ಪುರಸಭಾಧ್ಯಕ್ಷರಾದ ಕೆ.ಎಂ. ನಾರಾಯಣಸ್ವಾಮಿ, ಎಸ್.ಎ. ಪಾರ್ಥಸಾರಥಿ, ರಶೀದ್ಖಾನ್, ಶಂಶುದ್ದೀನ್ಬಾಬು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್, ಶ್ರೀಧರರಾಜ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.