ಹುಣಸೂರು: ಗೋದಾಮಿನ ಕೊರತೆಯಿಂದಾಗಿ ಬತ್ತ ಖರೀದಿ ಕೇಂದ್ರದಲ್ಲಿ ಸೋಮವಾರದಿಂದ ಬತ್ತ ಖರೀದಿಯನ್ನು ಸ್ಥಗಿತಗೊಳಿಸಿರುವುದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿ ಪ್ರತಿಭಟಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೆ.ಎಫ್.ಸಿ.ಎಸ್.ಸಿ. ತೆರೆದಿರುವ ಬತ್ತ ಖರೀದಿ ಕೇಂದ್ರಕ್ಕೆ ಬತ್ತ ಬರಲಾರಂಭಿಸಿದ್ದು, ಖರೀದಿ ಮಾಡಿದ ಬತ್ತವನ್ನು ಶೇಖರಣೆ ಮಾಡಲು ಗೋದಾಮಿನ ಕೊರತೆ ಉಂಟಾಗಿದೆ.
ಇದರಿಂದ ರೈತರಿಗೆ ಮತ್ತೆ ತೊಂದರೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬೆಳಗ್ಗೆಯಿಂದಲೇ ಬತ್ತ ಖರೀದಿ ಕೇಂದ್ರದ ಎದುರು ಬತ್ತ ತುಂಬಿದ ಲಾರಿ, ಟ್ರಾಕ್ಟರ್ಗಳು ಸಾಲುಗಟ್ಟಿ ನಿಂತಿದ್ದವು. ಮಧ್ಯಾಹ್ನದವರಿಗೆ ಶಾಂತಿಯಿಂದ ಕುಳಿತಿದ್ದ ರೈತರು ಮಧ್ಯಾಹ್ನವಾದರೂ ಗೋದಾಮಿನ ವ್ಯವಸ್ಥೆ ಮಾಡುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು.
ಬತ್ತ ಖರೀದಿ ಕೇಂದ್ರದಲ್ಲಿ ಈವರಿಗೆ 7 ಸಾವಿರ ಕ್ವಿಂಟಲ್ ಖರೀದಿ ಮಾಡಲಾಗಿದ್ದು, ಅವುಗಳನ್ನು ರತ್ನಾಪುರಿ, ಹುಣಸೂರು, ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಕಾಫಿ ವರ್ಕ್ಸ್ಗಳಲ್ಲಿ ಶೇಖರಿಸಿ ಇಡಲಾಗಿದೆ. ಈಗಾಗಲೇ 400 ರೈತರು ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದು, ಈ ರೈತರು ಗದ್ದೆ ಬಯಲಿನಿಂದ ಬಂದಲ್ಲಿ ಖರೀದಿಸಿ ಶೇಖರಿಸುವುದಾದರೂ ಎಲ್ಲಿ ಎಂದು ಕೆ.ಎಫ್.ಸಿ.ಎಸ್.ಸಿ. ಅಧಿಕಾರಿ ಪುಟ್ಟಸ್ವಾಮಿಗೌಡ ಪ್ರಶ್ನಿಸುತ್ತಾರೆ.
ಬತ್ತ ಶೇಖರಿಸಲು ಸೂಕ್ತ ಗೋದಾಮಿನ ವ್ಯವಸ್ಥೆ ಕಲ್ಪಿಸುವಂತೆ ತಹಸಿಲ್ದಾರ್ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರರಿಗೆ ಮನವಿ ಮಾಡಿಕೊಂಡಿದ್ದರೂ ಈವರಿಗೆ ಗೋದಾಮಿನ ವ್ಯವಸ್ಥೆ ಕುರಿತು ಯಾವುದೇ ಮಾಹಿತಿ ಇಬ್ಬರಿಂದಲೂ ಬಂದಿಲ್ಲ ಎನ್ನುತ್ತಾರೆ.
ಉಂಡವಾಡಿ ರೈತ ಡಿ.ರಾಮಚಂದ್ರ ಮಾತನಾಡಿ, ರೈತರು ಮಾರುಕಟ್ಟೆಗೆ ತರುವ ಮುನ್ನವೇ ಗೋದಾಮುಗಳು ಭರ್ತಿಯಾಗಿದೆ ಎನ್ನುತ್ತಿದ್ದಾರೆ. ಇದರಿಂದ ರೈತನಿಗೆ ನುಂಗಲಾರದ ತುತ್ತಾಗಿದೆ ಎನ್ನುತ್ತಿದ್ದಾರೆ.
ಅಧಿಕಾರಿಗಳು ರೈಸ್ಮಿಲ್ ಮಾಲೀಕರೊಂದಿಗೆ ಶಾಮೀಲಾಗಿ ಕ್ವಿಂಟಲ್ ಬತ್ತಕ್ಕೆ ರೂ. 100 ರಂತೆ ಲಂಚ ಪಡೆದು ಅವರಿಗೆ ಸೇರಿದ ಬತ್ತ ಗೋದಾಮಿನಲ್ಲಿ ಶೇಖರಿಸಿದ್ದಾರೆ. ಸರ್ಕಾರ ರೈತನಿಗೆ ಅನುಕೂಲವಾಗಲಿ ಎಂದು ತೆರೆದ ಖರೀದಿ ಕೇಂದ್ರ ಬಂಡವಾಳಶಾಹಿಗಳ ಪಾಲಾಗಿದೆ ಎಂದು ರೈತ ಜಾಕಿಬ್ ಆರೋಪಿಸಿದರು.
ಸರ್ಕಾರ ಬತ್ತ ಖರೀದಿ ಮಾಡಲು ಸಿದ್ದವಾಗಿರುವಾಗಿದ್ದರೂ ಅಧಿಕಾರಿಗಳು ತಾಲ್ಲೂಕಿನ ಬತ್ತದ ಗದ್ದೆಗೆ ಅನುಗುಣವಾಗಿ ಗೋದಾಮಿನ ವ್ಯವಸ್ಥೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಅವರದ್ದು. ಹುಣಸೂರು ಕೇಂದ್ರವನ್ನು ಮುಚ್ಚಲು ರೈತರು ಬಿಡುವುದಿಲ್ಲ ಎಂದು ದಸಂಸ ಮುಖಂಡ ಕೆಂಪರಾಜು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.